ADVERTISEMENT

ದಾವೂದ್‌ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ: ಕೊನೆಗೂ ಸತ್ಯ ಬಾಯ್ಬಿಟ್ಟ ಪಾತಕಿ ಸಹೋದರ

ಏಜೆನ್ಸೀಸ್
Published 22 ಸೆಪ್ಟೆಂಬರ್ 2017, 10:31 IST
Last Updated 22 ಸೆಪ್ಟೆಂಬರ್ 2017, 10:31 IST
ದಾವೂದ್‌ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ: ಕೊನೆಗೂ ಸತ್ಯ ಬಾಯ್ಬಿಟ್ಟ ಪಾತಕಿ ಸಹೋದರ
ದಾವೂದ್‌ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ: ಕೊನೆಗೂ ಸತ್ಯ ಬಾಯ್ಬಿಟ್ಟ ಪಾತಕಿ ಸಹೋದರ   

ಮುಂಬೈ: ಭೂಗತ ಪಾತಕಿ, ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ದಾವೂದ್‌ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಆತನ ಸಹೋದರ ಇಕ್ಬಾಲ್‌ ಕಷ್ಕರ್‌ ಹೇಳಿದ್ದಾನೆ. ಸುಲಿಗೆ ಪ್ರಕರಣದಲ್ಲಿ ಸಿಕ್ಕಿಬಿದ್ದು, ಸದ್ಯ ಥಾಣೆ ಪೊಲೀಸರ ವಶದಲ್ಲಿರುವ ಆತ ವಿಚಾರಣೆ ವೇಳೆ ಮಹತ್ವದ ಮಾಹಿತಿ ಹೊರಹಾಕಿದ್ದಾನೆ.

ಜತೆಗೆ ದಾವೂದ್‌ ಕರಾಚಿಯಲ್ಲಿ ಉಳಿದುಕೊಂಡಿರುವ ನಾಲ್ಕು ಗೌಪ್ಯ ಪ್ರದೇಶಗಳ ಮಾಹಿತಿಯನ್ನೂ ತನಿಖಾಧಿಕಾರಿಗಳಿಗೆ ನೀಡಿದ್ದಾನೆ.

‘ಇಕ್ಬಾಲ್‌ ನೀಡಿರುವ ಮಾಹಿತಿ ಕೇಂದ್ರೀಯ ತನಿಖಾ ದಳ(ಸಿಐಎ) ಅಧಿಕಾರಿಗಳಿಗೆ ಈಗಾಗಲೇ ತಿಳಿದಿರುವ ಮಾಹಿತಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು. ಅದಕ್ಕಾಗಿ ಸಿಐಎ ಅಧಿಕಾರಿಗಳು ಥಾಣೆ ಪೊಲೀಸ್‌ರೊಂದಿಗೆ ತನಿಖೆಯಲ್ಲಿ ಕೈಜೋಡಿಸಬಹುದು’ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಥಾಣೆ ಪೋಲಿಸ್‌ ಆಯುಕ್ತ ಪರಮ್‌ಬೀರ್‌ ಸಿಂಗ್‌, ‘ತನಿಖೆ ಪ್ರಗತಿಯಲ್ಲಿದೆ’ ಎಂದು ಹೇಳಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

‘ತನಿಖೆಯ ವೇಳೆ ಇಕ್ಬಾಲ್‌ ತಾನು 2003ರಲ್ಲಿ ದುಬೈನಲ್ಲಿ ದಾವೂದ್‌ನನ್ನು ಭೇಟಿ ಮಾಡಿದ್ದೆ ಎಂದು ಹೇಳಿಕೊಂಡಿದ್ದಾನೆ. ಆದರೆ ದಾವೂದ್‌ ಪುತ್ರಿ ಮಹ್ರುಕ್‌ಳ ಮದುವೆ ನಡೆದದ್ದು 2005ರಲ್ಲಿ. ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ ಪುತ್ರ ಜುನೈದ್‌ ಜತೆ ಪಶ್ಚಿಮ ಏಷ್ಯಾದಲ್ಲಿ ನಡೆದ ಮದುವೆ ಸಮಾರಂಭಕ್ಕೆ ದಾವೂದ್‌ ಬಂದಿದ್ದ ಎಂದು ವರದಿಯಾಗಿತ್ತು. ಹೀಗಾಗಿ ಇಕ್ಬಾಲ್‌ ತಮ್ಮನ್ನು ಗೊಂದಲಕ್ಕೀಡುಮಾಡಲು ಈ ರೀತಿ ಹೇಳುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಪಾತಕಿ ದಾವೂದ್‌ ಪಾಕಿಸ್ತಾನದಲ್ಲೇ ಅಡಗಿಕೊಂಡಿದ್ದಾನೆ ಎಂದು ಭಾರತ ಹಲವು ವರ್ಷಗಳಿಂದ ಖಚಿತವಾಗಿ ಹೇಳುತ್ತಿದೆಯಾದರೂ ಪಾಕಿಸ್ತಾನ ನಿರಂತರವಾಗಿ ಅದನ್ನು ಅಲ್ಲಗೆಳೆಯುತ್ತಾ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.