ನವದೆಹಲಿ (ಪಿಟಿಐ): ಉಬರ್ ಟ್ಯಾಕ್ಸಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಈಗ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡುತ್ತಿದ್ದಾರೆ.
ಉಬರ್ ಘಟನೆ ನಡೆದ ನಂತರ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ದೆಹಲಿಗೆ ಬಂದಾಗ ಆರೋಪಿ ಶಿವಕುಮಾರ್ ಯಾದವ್ ತನ್ನೊಂದಿಗೂ ಅನುಚಿತವಾಗಿ ವರ್ತಿಸಿದ್ದ ಎಂಬ ವಿಚಾರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಆಕೆಗೆ ಟ್ವಿಟರ್ ಮೂಲಕವೇ ಉತ್ತರಿಸಿದ ದೆಹಲಿ ಉತ್ತರ ಡಿಸಿಪಿ ಮಧುರ್ ವರ್ಮಾ ಕೂಡಲೇ ಪ್ರಕರಣ ದಾಖಲಿಸುವಂತೆ ಕೇಳಿಕೊಂಡರು.
ನಿರ್ಭಯಾ ಪ್ರಕರಣದಂತೆ ಅಲ್ಲದೇ ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಕ್ಷಿಪ್ರವಾಗಿ ಆರೋಪಿಯನ್ನು ಪತ್ತೆಹಚ್ಚಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಸಂತ್ರಸ್ತ ಯುವತಿಯ ತಂದೆ ಹೇಳಿದ್ದರು. ಆದರೆ, ಪೊಲೀಸರು ಅದನ್ನು ನಯವಾಗಿ ತಿರಸ್ಕರಿಸಿದ್ದಾರೆ.
ಉಬರ್ನ ಏಷ್ಯಾ ಘಟಕದ ಮುಖ್ಯಸ್ಥ ಎರಿಕ್ ಅಲೆಕ್ಸಾಂಡರ್ ಅವರನ್ನು ಪೊಲೀಸರು ಪ್ರಶ್ನಿಸಿದ ನಂತರ, ಉಬರ್ ಸುರಕ್ಷತಾ ಮಾನದಂಡ ಪೂರೈಸಲು ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ಸ್ಪಷ್ಟಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.