ನವದೆಹಲಿ: ದೇಶವನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯನ್ನು ಉದ್ದೇಶಿಸಿ ಆರೋಪಿಸಿದರು.
ಕಾಂಗ್ರೆಸ್ ಪಕ್ಷದ 84ನೇ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಒಬ್ಬರನ್ನೊಬ್ಬರು ಎತ್ತಿಕಟ್ಟುವ ಮೂಲಕ ನಮ್ಮ ದೇಶವನ್ನು ವಿಭಜಿಸಲಾಗುತ್ತಿದೆ. ಜನರನ್ನು ಒಗ್ಗೂಡಿಸುವುದು ಕಾಂಗ್ರೆಸ್ನ ಕೆಲಸ. ನಿಮ್ಮ ಬಳಿ ಇರುವ ‘ಕೈ’ ಚಿಹ್ನೆಯೇ ನಿಮ್ಮ ಶಕ್ತಿ. ಈ ಚಿಹ್ನೆ ದೇಶವನ್ನು ಒಗ್ಗೂಡಿಸುವುದಲ್ಲದೆ, ಮುಂದಕ್ಕೆ ಒಯ್ಯಲಿದೆ’ ಎಂದು ಹೇಳಿದರು.
‘ಅವರು (ಬಿಜೆಪಿ) ಸಿಟ್ಟನ್ನು ಬಳಸಿದರೆ ನಾವು ಪ್ರೀತಿಯನ್ನು ಬಳಸುತ್ತೇವೆ. ಈ ದೇಶ ಎಲ್ಲರಿಗೂ ಸೇರಿದ್ದು. ಕಾಂಗ್ರೆಸ್ ಏನನ್ನು ಮಾಡಲಿದೆಯೋ ಅದು ಎಲ್ಲರ ಒಳಿತಿಗಾಗಿಯೇ ಇರಲಿದೆ’ ಎಂದು ರಾಹುಲ್ ಹೇಳಿದರು.
2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಿದ್ಧತೆಗಾಗಿ ಆಯೋಜಿಸಲಾಗಿರುವ ಅಧಿವೇಶನದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಶಾಸಕರು ಮತ್ತು ಹಿರಿಯ ನಾಯಕರು ಭಾಗಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.