ADVERTISEMENT

ನಕ್ಸಲ್‌ರ ದಾಳಿಗೆ 11 ಬಲಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 10:38 IST
Last Updated 12 ಏಪ್ರಿಲ್ 2014, 10:38 IST

ರಾಯ್‌ಪುರ್ (ಪಿಟಿಐ): ಛತ್ತಿಸ್‌ಗಡದ ಬಿಜಾಪುರ್ ಮತ್ತು ಬಸ್ತಾರ್ ಜಿಲ್ಲೆಗಳಲ್ಲಿ ಶನಿವಾರ ನಕ್ಸಲರು ಬಸ್ ಹಾಗೂ ಅಂಬುಲೆನ್ಸ್ ಸ್ಫೋಟಿಸಿದ್ದಾರೆ.  ಒಂದು ಗಂಟೆಯ ಅವಧಿಯೊಳಗೆ ನಡೆದ ಈ ಅವಳಿ ಸ್ಫೋಟಗಳಲ್ಲಿ ಆರು  ಜನ ಚುನಾವಣಾ ಸಿಬ್ಬಂದಿ ಹಾಗೂ ಐವರು ಕೇಂದ್ರಿಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಯೋಧರು ಮೃತಪಟ್ಟಿದ್ದಾರೆ.

ಉಭಯ ಪ್ರಕರಣಗಳಲ್ಲಿ 10 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಚುನಾವಣಾ ಕರ್ತವ್ಯದ ಮೇಲೆ ತೆರಳಿದ್ದ ಸಿಬ್ಬಂದಿಗಳ ವಾಹನ ಮೇಲೆ ಕೆತುಲ್‌ನಾರ್ ಗ್ರಾಮದ ಬಳಿ ನಕ್ಸಲ್‌ರು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ದಾಳಿ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ನಕ್ಸಲ್ ಕಾರ್ಯಾಚರಣೆ) ಆರ್.ಕೆ.ವಿಜ್ ತಿಳಿಸಿದರು.

ಚುನಾವಣಾ ಸಿಬ್ಬಂದಿಯಿದ್ದ ವಾಹನವು ಕೆತುಲ್‌ನಾರ್ ಗ್ರಾಮದ ಬಳಿಯ ಕೊಳದ ಸಮೀಪ ಬರುತ್ತಿದ್ದಂತೆ ನಕ್ಸಲ್‌ರು ಹುದುಗಿಸಿಟ್ಟಿದ್ದ ನೆಲ ಬಾಂಬ್ ಸ್ಫೋಟಿಸಿದ್ದಾರೆ. ಘಟನೆಯಲ್ಲಿ ವಾಹನದಲ್ಲಿ ಸಿಬ್ಬಂದಿಗಳ ಪೈಕಿ ಆರು ಜನರು ಸ್ಥಳದಲ್ಲಿಯೇ ಮೃತಪಟ್ಟರೆ ಹಲವರು ಗಾಯಗೊಂಡಿದ್ದಾರೆ ಎಂದು ವಿಜ್ ಹೇಳಿದರು.

ಘಟನೆಯ ನಂತರ ಭದ್ರತಾ ಸಿಬ್ಬಂದಿಗಳು ಪ್ರತಿದಾಳಿಗೆ ಮುಂದಾಗುತ್ತಿದ್ದಂತೆ ನಕ್ಸಲ್‌ರು ದಟ್ಟಾರಣ್ಯದಲ್ಲಿ ಪಲಾಯನ ಮಾಡಿದರು. ಸಿಬ್ಬಂದಿ ರಕ್ಷಣೆಗಾಗಿ ಹೆಚ್ಚುವರಿ ಪಡೆಗಳನ್ನು ಘಟನಾಸ್ಥಳಕ್ಕೆ ರವಾನಿಸಲಾಗಿದೆ ಎಂದರು.

ಬಸ್ತಾರ್ ಪ್ರಾಂತ್ಯದಲ್ಲಿನ ಸ್ಫೋಟದ ಒಂದು ಗಂಟೆಯ ಅವಧಿಯೊಳಗೆ ನಕ್ಸಲ್‌ರು ಬಿಜಾಪುರ್ ಜಿಲ್ಲೆಯ ಕಮನಾರ್ ಗ್ರಾಮದಲ್ಲಿ ಅಂಬುಲೆನ್ಸ್‌ವೊಂದನ್ನು ಸ್ಫೋಟಿಸಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಒಂಬತ್ತು ಸಿಆರ್‌ಪಿಎಫ್ ಸಿಬ್ಬಂದಿಗಳ ಪೈಕಿ ಐವರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.