ಹೈದರಾಬಾದ್: ಇಲ್ಲಿನ ಲೇಕ್ವ್ಯೂ ಅತಿಥಿಗೃಹದಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಸೋಮವಾರ ನಡೆದ ಸಂಪುಟ ಸಭೆ ವಿಶಿಷ್ಟವಾಗಿತ್ತು. ಸಿ.ಎಂ ಸೇರಿದಂತೆ ಸಚಿವರು ಸಭೆಗೆ ಕಡತಗಳ ಬದಲಿಗೆ ಐಪಾಡ್ಗಳನ್ನು ತಂದಿದ್ದರು.
ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಹೆಸರಾಗಿರುವ ನಾಯ್ಡು ದೇಶದಲ್ಲೇ ಮೊದಲ ಬಾರಿಗೆ ಕಾಗದ ರಹಿತ ‘ಇ– ಕ್ಯಾಬಿನೆಟ್’ ಸಭೆ ನಡೆಸಿದರು. ಇ– ಆಡಳಿತದ ಮತ್ತೊಂದು ಕ್ರಮವಾಗಿ ಇದು ಗಮನ ಸೆಳೆಯಿತು. ಇದರೊಂದಿಗೆ ಸರ್ಕಾರದ ಕಾರ್ಯನಿರ್ವಹಣೆಗೆ ಎಲೆಕ್ಟ್ರಾನಿಕ್ ಮಾದರಿಯ ಬಳಕೆಗೆ ಚಾಲನೆ ನೀಡಲಾಯಿತು.
ಟಿಡಿಪಿ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿದ್ದು ‘ಇ– ಕ್ಯಾಬಿನೆಟ್’ ಸಭೆ ವಿಶೇಷ ಕಳೆ ನೀಡಿತು. ಸಭೆಯ ಕಾರ್ಯಸೂಚಿಯನ್ನು ಸಚಿವರಿಗೆ ಇ–ಮೇಲ್ ಮೂಲಕ ಕಳುಹಿಸಲಾಗಿತ್ತು ಮತ್ತು ನಡಾವಳಿಗಳನ್ನು ಎಲೆಕ್ಟ್ರಾನಿಕ್ ವಿಧಾನದ ಮೂಲಕವೇ ದಾಖಲು ಮಾಡಲಾಯಿತು. ವಿವರವಾದ ಚರ್ಚೆಗಾಗಿ ಪ್ರಮುಖ ವಿಷಯಗಳನ್ನು ಪವರ್ ಪಾಯಿಂಟ್ ಮೂಲಕ ಮಂಡಿಸಲಾಯಿತು.
ಬಹುತೇಕ ಸಚಿವರಿಗೆ ಐಪಾಡ್ ಬಳಕೆ ಹೊಸದಾಗಿದ್ದರೂ ಯಾವುದೇ ಗೊಂದಲವಿಲ್ಲದೆ ನಾಲ್ಕು ಗಂಟೆ ನಡೆದ ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದರು. ‘ಇ– ಕ್ಯಾಬಿನೆಟ್’ಗಾಗಿ ವಿಶೇಷವಾಗಿ ಅ್ಯಪ್ ರೂಪಿಸಲಾಗಿತ್ತು. ‘ನಾವೀಗ 100 ದಿನಗಳನ್ನು ಪೂರೈಸಿದ್ದೇವೆ. ಇಂತಹ ನಿರ್ಣಾಯಕ ದಿನಗಳಲ್ಲಿ ರಾಜ್ಯಕ್ಕೆ ಅಗತ್ಯವಾದ ನೀತಿ ರೂಪಿಸಲು ಯತ್ನಿಸಿದ್ದೇವೆ. ನಮ್ಮ ಪ್ರತಿ ಹೆಜ್ಜೆಯು ರಾಜ್ಯದ ಜನರ ಸುಂದರ ದಿನದ ಅರುಣೋದಯಕ್ಕೆ ಮುನ್ನುಡಿ ಹಾಡಲಿದೆ’ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.