ADVERTISEMENT

ನೇಪಾಳ ಭೇಟಿ: ನಿರೀಕ್ಷೆ ಮೀರಿದ ಯಶಸ್ಸು- ಸುಷ್ಮಾ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 10:59 IST
Last Updated 28 ಜುಲೈ 2014, 10:59 IST

ಕಠ್ಮಂಡು(ಪಿಟಿಐ): ಭಾರತ ಹಾಗು ನೇಪಾಳದ ನಡುವಿನ ಸಾಮರಸ್ಯ ವೃದ್ಧಿಗಾಗಿ ನೇಪಾಳಕ್ಕೆ ನೀಡಿದ್ದ ಮೂರು ದಿನಗಳ ತಮ್ಮ ಭೇಟಿಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಅವರು ಬಣ್ಣಿಸಿದ್ದಾರೆ. ತ್ರಿಭುವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.

ಮೂರು ದಿನಗಳ ಭೇಟಿಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಗಾಗಿ ಸಂಪೂರ್ಣ ಮಾರ್ಗಸೂಚಿಯನ್ನು ರೂಪಿಸಲಾಗಿದ್ದು. ಪ್ರಸ್ತುತ ಸನ್ನಿವೇಶದಲ್ಲಿ 1950ರ ಶಾಂತಿ ಮತ್ತು ಸ್ನೇಹ ಒಪ್ಪಂದದ 'ಪುನರವಲೋಕನ ಮತ್ತು  ಹೊಂದಾಣಿಕೆ'ಗೆ ಗಮನ ಹರಿಸಲಾಗಿದೆ ಎಂದು ಅವರು ನುಡಿದರು.

ಇಪ್ಪತ್ತಮೂರು ವರ್ಷಗಳ ಬಳಿಕ  ಶನಿವಾರ ನಡೆದ ಭಾರತ - ನೇಪಾಳ ಜಂಟಿ ಆಯೋಗದ ಸಭೆಯ ಸಹ-ಅಧ್ಯಕ್ಷತೆ ವಹಿಸಲುವ ಸಲುವಾಗಿ ಸುಷ್ಮಾ ಸ್ವರಾಜ್ ಅವರು ಕಠ್ಮಂಡುವಿಗೆ ಭೇಟಿ ನೀಡಿದ್ದರು. ಈ ಸಭೆಯಲ್ಲಿ ಉಭಯ ರಾಷ್ಟ್ರಗಳು 26 ಅಂಶಗಳಿಗೆ ಒಪ್ಪಿಗೆ ನೀಡಿವೆ.  ಆಗಸ್ಟ್ 3ರಂದು ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಭೇಟಿಗಾಗಿ ಭೂಮಿಕೆ ಸಿದ್ಧಪಡಿಸುವ ಸಲುವಾಗಿ ಈ ಸಭೆ ನಡೆಯಿತು. 1997 ರಲ್ಲಿ ಅಂದಿನ ಪ್ರಧಾನಿ ಕೆ.ಗುಜ್ರಾಲ್ ಅವರು ನೀಡಿದ್ದ ಭೇಟಿಯ 17 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ನೇಪಾಳಕ್ಕೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.

ADVERTISEMENT

ಹಲವು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಹಕಾರ ನೀಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಮೂರು ದಿನಗಳ ಭೇಟಿಯಲ್ಲಿ ನೇಪಾಳದ ಅಧ್ಯಕ್ಷ ರಾಮ್‌ ಬರನ್‌ ಯಾದವ್‌, ಪ್ರಧಾನಿ ಸುಶೀಲ್ ಕೊಯಿರಾಲ ಹಾಗೂ ನೇಪಾಳದ ಪ್ರಮುಖ ನಾಯಕರನ್ನು ಸುಷ್ಮಾ ಭೇಟಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.