ನವದೆಹಲಿ: ಭಾರತದ ಯಶಸ್ಸಿಗೆ ಅದರ ವೈವಿಧ್ಯ ಮುಖ್ಯ. ಆರ್ಥಿಕ ನಾಯಕ ಮತ್ತು ನೈತಿಕ ಮೇಲ್ಪಂಕ್ತಿಯ ದೇಶವನ್ನು ನಿರ್ಮಿಸಬೇಕು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಷ್ಟ್ರದ ಜನರಿಗೆ ಕರೆ ನೀಡಿದರು.
ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಮಂಗಳವಾರ ಮಧ್ಯಾಹ್ನ 12.15ಕ್ಕೆ ನಡೆದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು ಬೋಧಿಸಿದ ಪ್ರತಿಜ್ಞಾ ವಿಧಿ ಅನ್ವಯ 14ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ರಾಮನಾಥ ಕೋವಿಂದ್ ಅವರು, ನಿರ್ಗಮಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ, ರಾಷ್ಟ್ರವನ್ನುದ್ದೇಶಿಸಿ ಪ್ರಥಮ ಭಾಷಣ ಮಾಡಿದರು.
ಶಿಕ್ಷಣ ಮತ್ತು ನೈತಿಕತೆ ನೆಲೆಗಟ್ಟಿನಲ್ಲಿ ಸಮಾನತೆಯ ಸಮಾಜವನ್ನು ನಿರ್ಮಿಸಬೇಕು ಎಂದು ರಾಮನಾಥ ಕೋವಿಂದ್ ಅವರು ಹೇಳಿದರು.
‘ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ. ಆದರೆ, ಹೆಚ್ಚು ಸಾಧನೆ ಮಾಡಲು ಪ್ರಯತ್ನಿಸುವ ಮೂಲಕ ಮತ್ತಷ್ಟು ಉತ್ತಮಗೊಳಿಸಲು ವೇಗವಾಗಿ ಕೆಲಸ ಮಾಡಬೇಕಿದೆ. ಇದು ಭಗವಾನ್ ಬುದ್ಧನ ಶಾಂತಿಯುತ ಭೂಮಿ. ಶಾಂತಿ ಮತ್ತು ಪರಿಸರ ಸಮತೋಲನಕ್ಕೆ ಒತ್ತು ನೀಡಬೇಕು ಎಂದರು.
‘ಭಾರತದ ಯಶಸ್ಸಿನ ಪ್ರಾಮುಖ್ಯತೆ ಅದರ ವೈವಿಧ್ಯವಾಗಿದೆ. ನಮ್ಮ ವೈವಿಧ್ಯ ನಮಗೆ ಅಷ್ಟೊಂದು ವಿಶಿಷ್ಟವಾದುವು. ಇದು ಒಂದು ಆರ್ಥಿಕ ನಾಯಕ ಮತ್ತು ನೈತಿಕ ಮೇಲ್ಪಂಕ್ತಿಯ ದೃಢವಾದ ರಾಷ್ಟ್ರವನ್ನು ನಾವು ನಿರ್ಮಿಸಬೇಕಿದೆ. ಶಿಕ್ಷಣದ ಮೂಲಕ ಸುಶೀಕ್ಷಿತರನ್ನು ರೂಪಿಸಿ, ನೈತಿಕತೆ ನೆಲೆಗಟ್ಟಿನಲ್ಲಿ ಸಮಾನತೆಯ ಸಮಾಜವನ್ನು ಕಟ್ಟಬೇಕಿದೆ ಎಂದು ಅವರು ಆಶಿಸಿದರು.
ಮಹಿಳೆಯ ಕುರಿತು ಉಲ್ಲೇಖಿಸಿದ ನೂತನ ರಾಷ್ಟ್ರಪತಿ, ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಮಹತ್ವದ್ದು ಎಂದ ಅವರು, ರಾಷ್ಟ್ರಗಳು ಕೇವಲ ಸರ್ಕಾರಗಳಿಂದ ಮಾತ್ರ ನಿರ್ಮಿಸಲ್ಪಟ್ಟಿಲ್ಲ; ರಾಷ್ಟ್ರೀಯ ಹೆಮ್ಮೆಯ ಅಗತ್ಯವಿದೆ ಎಂದರು.
ಭಾರತದ ಪ್ರತಿಯೊಬ್ಬ ನಾಗರಿಕರೂ ರಾಷ್ಟ್ರದ ನಿರ್ಮಾಪಕರೇ ಆಗಿದ್ದಾರೆ. ಭಯೋತ್ಪಾದನೆ ಮತ್ತು ಅಪರಾಧ ಕೃತ್ಯಗಳ ವಿರುದ್ಧ ಹೋರಾಡುವ ಪೊಲೀಸ್ ಮತ್ತು ಸೈನಿಕ ಪಡೆಗಳೂ ರಾಷ್ಟ್ರದ ನಿರ್ಮಾತೃಗಳೇ ಆಗಿದ್ದಾರೆ.
‘ಮನೆ ಮತ್ತು ಕೆಲಸದ ಜವಾಬ್ದಾರಿಗಳನ್ನು ಹೊಂದಿದ್ದರೂ ಮಕ್ಕಳನ್ನು ಆದರ್ಶ ನಾಗರೀಕರನ್ನಾಗಿ ಬೆಳೆಸುವ ಮಹಿಳೆಯರೂ ರಾಷ್ಟ್ರದ ನಿರ್ಮಾತೃಗಳಾಗಿದ್ದಾರೆ ಎಂದು ಅವರು ಹೇಳಿದರು.
ಇವನ್ನೂ ಓದಿ...
* 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಪ್ರಮಾಣವಚನ ಸ್ವೀಕಾರ
* ರಾಷ್ಟ್ರಪತಿಯಾಗಿ ಪ್ರಮಾಣ ಸ್ವೀಕರಿಸುವ ಮುನ್ನ ಮಹಾತ್ಮ ಗಾಂಧೀಜಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ರಾಮನಾಥ ಕೋವಿಂದ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.