ನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ನಿರ್ಧಾರವೇ ತಪ್ಪು. ಹೀಗಿರುವಾಗ ನೋಟು ರದ್ದತಿ ನಿರ್ಧಾರದ ಅನುಷ್ಠಾನ ಸರಿಯಿಲ್ಲ ಎಂದು ದೂಷಿಸುವ ಅಗತ್ಯವಿಲ್ಲ ಎಂದು ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಒಂದು ವೇಳೆ ನಿರ್ಧಾರ ಅಥವಾ ಈ ಆಲೋಚನೆ ಸರಿಯಾಗಿ ಇದ್ದಿದ್ದರೆ, ಅದು ಸುಲಲಿತವಾಗಿ ಕಾರ್ಯ ವಹಿಸುತ್ತಿತ್ತು. ಆದರೆ ಆ ನಿರ್ಧಾರವೇ ಸರಿಯಿಲ್ಲ ಎಂದಾದರೆ, ಉದಾಹರಣೆಗೆ ನೋಟು ರದ್ದತಿ. ಇದರ ಅನುಷ್ಠಾನವನ್ನು ದೂಷಿಸುವುದು ಸರಿಯಲ್ಲ. ಈ ನಿರ್ಧಾರವೇ ತಪ್ಪು ಎಂದು ನಾಸ್ಕಾಮ್ ಲೀಡರ್ಶಿಪ್ ಫೋರಂ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ ಬಜಾಜ್ ಹೇಳಿದ್ದಾರೆ.
ಅದೇ ವೇಳೆ ಕೇಂದ್ರ ಸರ್ಕಾರದ ಮೇಡ್ ಇನ್ ಇಂಡಿಯಾ ಯೋಜನೆಯನ್ನು ಟೀಕಿಸಿದ ಬಜಾಜ್, ನಿಮ್ಮ ಹೊಸ ಯೋಜನೆಗಳಿಗೆ ಸರ್ಕಾರದ ಅನುಮತಿ ಅಥವಾ ಕಾನೂನು ಪ್ರಕ್ರಿಯೆ ಅಗತ್ಯ ಎಂದಾದರೆ ಅದು ಮೇಡ್ ಇನ್ ಇಂಡಿಯಾ (Made In India) ಅಲ್ಲ ಮ್ಯಾಡ್ ಇನ್ ಇಂಡಿಯಾ (Mad in India) ಆಗುವುದು ಎಂದಿದ್ದಾರೆ.
ಐದು ವರ್ಷಗಳಾದರೂ ನಾವು ನಮ್ಮ ದೇಶದಲ್ಲಿ ನಾಲ್ಕು ಚಕ್ರದ ವಾಹನಗಳ ಮಾರಾಟ ಮಾಡಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ ಬಜಾಜ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.