ADVERTISEMENT

ನ್ಯಾಯಾಂಗ ತನಿಖೆಗೆ ಪ್ರತಿಪಕ್ಷಗಳ ಒತ್ತಾಯ

ದೂರವಾಣಿ ಕರೆ ಕದ್ದಾಲಿಕೆಗೆ ಮೈಕ್ರೊಫೋನ್‌ ಅಳವಡಿಕೆ ವಿವಾದ

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 19:30 IST
Last Updated 31 ಜುಲೈ 2014, 19:30 IST

ನವದೆಹಲಿ (ಪಿಟಿಐ): ಸಚಿವರ ಮತ್ತು ಸಂಸದರ ದೂರವಾಣಿ ಕರೆ ಕದ್ದಾಲಿಸಲು ಗುಪ್ತವಾಗಿ ಮೈಕ್ರೊ­ಫೋನ್‌ ಅಳವಡಿಸಲಾಗಿದೆ ಎಂಬ ವಿವಾದ ಕುರಿತು ಗುರುವಾರ ರಾಜ್ಯಸಭೆಯಲ್ಲಿ ಕ್ರಿಯಾ ಲೋಪ ಎತ್ತಿದ ವಿರೋಧ ಪಕ್ಷಗಳು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು  ಒತ್ತಾಯಿಸಿದವು.

ಎನ್‌ಡಿಎ ಸರ್ಕಾರದ ವಿಶ್ವಾಸಾರ್ಹತೆಗೆ ಧಕ್ಕೆ­ಯಾಗಿ­ರುವ ಈ ವಿವಾದದ ಬಗ್ಗೆ ಪ್ರಧಾನಿ ಮೋದಿ ಸದನ­ದಲ್ಲಿ ಹೇಳಿಕೆ ನೀಡಬೇಕು ಎಂದು ಪಟ್ಟು ಹಿಡಿದವು.

ಮೇಲ್ಮನೆಯಲ್ಲಿ ಈ ವಿಷಯ ಸಂಬಂಧ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.   ಇದು ಸಂಸದರ ಹಕ್ಕುಗಳಿಗೆ ಚ್ಯುತಿ ತರುವ ಪ್ರಕರಣ,  ಸರ್ಕಾರವನ್ನು ವಜಾ ಮಾಡಲು ಕೂಡ ಅವಕಾಶ ಇದೆ. ಆದ್ದರಿಂದ ಕ್ರಿಯಾ ಲೋಪ ಎತ್ತಲು ಮತ್ತು ಚರ್ಚೆ ನಡೆಸಲು ಅವಕಾಶ ಇದೆ ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು. ಇದ್ದರಿಂದ ಗದ್ದಲ ಹೆಚ್ಚಾದ ಕಾರಣ ಪ್ರಶ್ನೋತ್ತರ ವೇಳೆಯಲ್ಲಿ ಎರಡು ಸಾರಿ ಮತ್ತು ಶೂನ್ಯ ವೇಳೆಯಲ್ಲಿ ಒಂದು ಸಾರಿ ಕಲಾಪವನ್ನು ಮುಂದೂಡಲಾಯಿತು.

ಇದಕ್ಕೂ ಮೊದಲು ಈ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್‌ನ ಪ್ರಮೋದ್‌ ತಿವಾರಿ, ‘ಸಚಿವರ ಮತ್ತು ಸಂಸದರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲು ಮೈಕ್ರೊಫೋನ್‌ ಅಳವಡಿಸಿ ಖಾಸಗಿತನದ ಹಕ್ಕಿಗೆ ಧಕ್ಕೆ ತಂದಿದೆ. ಮಂತ್ರಿಮಂಡಲದ ಮೇಲೆ ಜನರು ಇರಿಸಿದ್ದ ನಂಬಿಕೆಗೆ ಕುಂದುಂಟಾಗಿದೆ. ವಿಶ್ವಾಸವನ್ನು ಮರಳಿ ಗಳಿಸಬೇಕಿದ್ದರೆ ಈ ವಿವಾದದ ತನಿಖೆಗೆ ನ್ಯಾಯಾಂಗ ಆಯೋಗವನ್ನು ರಚಿಸಬೇಕು’  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.