ಮುಂಬೈ: ಹಠಾತ್ ಮತ್ತು ನಾಟಕೀಯ ಬೆಳವಣಿಗೆಯೊಂದರಲ್ಲಿ ಸೈರಸ್ ಪಿ. ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್ನ ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಿರುವ ವಿಚಾರವೀಗ ನ್ಯಾಯಾಲಯದ ಮೆಟ್ಟಿಲೇರಿದೆ.
ಈ ರೀತಿ ತನ್ನನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿರುವುದು ಸರಿಯಲ್ಲ ಎಂದು ಮಿಸ್ತ್ರಿ ಹೇಳಿದ್ದು ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.
ಮಿಸ್ತ್ರಿ ಅವರನ್ನು ವಜಾ ಮಾಡಿರುವ ಬಗ್ಗೆ ಅವರಾಗಲೀ ಅವರ ಕುಟುಂಬದ ಶಪೂರ್ಜಿ ಪಲ್ಲೊಂಜಿ ಗ್ರೂಪ್ ಅರ್ಜಿ ಸಲ್ಲಿಸಿದರೆ ಅದರ ವಿರುದ್ಧ ಕೇವಿಯಟ್ ನೀಡುವಂತೆ ಟಾಟಾ ಮುಂಬೈ ಹೈಕೋರ್ಟ್, ದೆಹಲಿ ಹೈಕೋರ್ಟ್ ಮತ್ತು ದೇಶಿಯ ಕಂಪನಿಯ ಕಾನೂನು ಟ್ರಿಬ್ಯೂನಲ್ ಮೊರೆ ಹೋಗಿದ್ದಾರೆ.
ಪಿಟಿಐ ಸುದ್ದಿಮೂಲದ ಪ್ರಕಾರ ಮಿಸ್ತ್ರಿ ಅವರು ಟಾಟಾ ಗ್ರೂಪ್ ಸಂಸ್ಥೆಯ ಹಂಗಾಮಿ ಅಧ್ಯಕ್ಷರಾಗಿರುವ ರತನ್ ಟಾಟಾ ಮತ್ತು ಟಾಟಾ ಟ್ರಸ್ಟ್ ವಿರುದ್ಧ ದೇಶೀಯ ಕಂಪನಿಯ ಕಾನೂನು ಟ್ರಿಬ್ಯೂನಲ್ ನಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ.
ಸೋಮವಾರ ಟಾಟಾ ಸನ್ಸ್ ಕಂಪೆನಿಯ ಆಡಳಿತ ಮಂಡಳಿಯ ಸಭೆಯ ಕಾರ್ಯ ಸೂಚಿಯಲ್ಲಿ ಮಿಸ್ತ್ರಿ ಅವರನ್ನು ಅಧ್ಯಕ್ಷ ಪದದಿಂದ ಕಿತ್ತು ಹಾಕುವ ವಿಷಯವೇ ಇರಲಿಲ್ಲ. ಕಾರ್ಯಸೂಚಿಯ ಕೊನೆಯಲ್ಲಿ ಸಾಮಾನ್ಯವಾಗಿ ಇರುವ ಇತರ ವಿಷಯಗಳ ಚರ್ಚೆ ಬಂದಾಗ ಮಿಸ್ತ್ರಿ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾವವನ್ನು ಆಡಳಿತ ಮಂಡಳಿ ಸದಸ್ಯರು ಮಾಡಿದ್ದರು.
ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಮಿಸ್ತ್ರಿ, ನನ್ನ ಪದಚ್ಯುತಿ ವಿಚಾರವನ್ನು ಕೋರ್ಟ್ ನಲ್ಲೇ ಪ್ರಶ್ನಿಸುತ್ತೇನೆ ಎಂದು ಗುಡುಗಿದ್ದರು.
ಏತನ್ಮಧ್ಯೆ, ಪದಚ್ಯುತಿ ವಿಚಾರದ ಬಗ್ಗೆ ಮಿಸ್ತ್ರಿ ಅವರು ಟಾಟಾ ಸನ್ಸ್ ನಿರ್ಧಾರವನ್ನು ಕೋರ್ಟಿಗೆಳೆಯುವ ತೀರ್ಮಾನವನ್ನು ಸದ್ಯ ತೆಗೆದುಕೊಂಡಿಲ್ಲ ಎಂದು ಮಿಸ್ತ್ರಿಯವರ ಕುಟುಂಬದ ಕಂಪನಿಯಾದ ಶಪೂರ್ ಜಿ ಪಲ್ಲೊಂಜಿ ಗ್ರೂಪ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.