ಬುಲಂದ್ಶಹರ್/ಉತ್ತರಪ್ರದೇಶ (ಪಿಟಿಐ): ತಮಗೆ ನೀಡಬೇಕಿರುವ ಬಾಕಿ ಹಣವನ್ನು ಕಿಂಗ್ಫಿಷರ್ ಏರ್ಲೈನ್ಸ್ ತಡೆ ಹಿಡಿದಿದೆ ಎಂದು ಸಹ ಪೈಲಟ್ವೊಬ್ಬರು ನೀಡಿರುವ ದೂರಿನ ಅನ್ವಯ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿಜಯ ಮಲ್ಯ ಅವರಿಗೆ ಇಲ್ಲಿನ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ವಂಚನೆ ಹಾಗೂ ವಿಶ್ವಾಸದ್ರೋಹ ಮಾಡಿರುವುದು (ಐಪಿಸಿ ಸೆಕ್ಷನ್ 420 ಮತ್ತು 406ರ ಅನ್ವಯ) ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ಉಮಾಕಾಂತ್ ಜಿಂದಾಲ್ ಅವರು ಮಲ್ಯ ಹಾಗೂ ಸಂಸ್ಥೆಯ ಉಪಾಧ್ಯಕ್ಷೆ ರೂಪಿ
ಆರ್ಯ ಅವರಿಗೆ ಸಮನ್ಸ್ ಜಾರಿ ಮಾಡಿದರು.
ತಮಗೆ ₨ 28.5 ಲಕ್ಷ ಬಾಕಿ ವೇತನವನ್ನು ಆರೋಪಿಗಳು ಪಾವತಿಸುತ್ತಿಲ್ಲ ಮತ್ತು ಆರ್ಯ ಅವರು ಲಿಖಿತವಾಗಿ ನೀಡಿದ್ದ ಆಶ್ವಾಸನೆಯನ್ನು ಉಳಿಸಿಕೊಂಡಿಲ್ಲ ಎಂದು ಕಿಂಗ್ಫಿಷರ್ ಏರ್ಲೈನ್ಸ್ನ ಸಹಪೈಲಟ್ ಆಗಿದ್ದ ಆಕಾಶ್ ಶರ್ಮ ಅವರು ಸಲ್ಲಿಸಿದ್ದ ದೂರಿನ ಅನ್ವಯ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.
ಆಕಾಶ್ ಶರ್ಮ 2006ರಲ್ಲಿ ಡೆಕ್ಕನ್ ಏವಿಯೇಶನ್ ಸಂಸ್ಥೆಗೆ ಸಹಪೈಲಟ್ ಆಗಿ ಸೇರಿದ್ದರು. ಈ ವಿಮಾನಯಾನ ಸಂಸ್ಥೆಯನ್ನು ಕಿಂಗ್ಫಿಷರ್ ಖರೀದಿಸಿದ ಬಳಿಕ 2012ರಲ್ಲಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿತ್ತು.
ಅಕ್ಟೋಬರ್ ಆರರಂದು ನಿಗದಿಯಾಗಿರುವ ಪ್ರಕರಣದ ಮುಂದಿನ ವಿಚಾರಣೆಗೆ ಆರೋಪಿಗಳನ್ನು ಹಾಜರುಪಡಿಸುವಂತೆ ಬೆಂಗಳೂರು ಪೊಲೀಸ್ ಅಧೀಕ್ಷಕರಿಗೆ ನ್ಯಾಯಾಲಯ ನಿರ್ದೇಶನ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.