ಕೋಲ್ಕತ್ತ (ಪಿಟಿಐ): ಬಹುಕೋಟಿ ವಂಚನೆಯ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಮದನ್ ಮಿತ್ರಾ ಅವರನ್ನು ಸಿಬಿಐ ಶುಕ್ರವಾರ ಬಂಧಿಸಿದೆ. ಇದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಭಾರಿ ಮುಜುಗರ ಉಂಟು ಮಾಡಿದೆ.
ಪಿತೂರಿ, ವಂಚನೆ ಮತ್ತು ಹಣ ದುರ್ಬಳಕೆ ಆರೋಪಗಳನ್ನು ಮಿತ್ರಾ ಅವರ ಮೇಲೆ ಹೊರಿಸಲಾಗಿದೆ. ಶಾರದಾ ಸಮೂಹದಿಂದ ಅನುಚಿತ ಆರ್ಥಿಕ ಪ್ರಯೋಜನ ಪಡೆದ ಆರೋಪಗಳ ಮೇಲೆ ಮದನ್ ಮಿತ್ರಾ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ.
ಇಲ್ಲಿನ ಸಿಬಿಐ ಕಚೇರಿಯಲ್ಲಿ ನಡೆದ 5 ತಾಸಿನ ವಿಚಾರಣೆ ನಂತರ ಅವರನ್ನು ಬಂಧಿಸಲಾಯಿತು.
ಶಾರದಾ ಸಮೂಹ ಮತ್ತು ಸಮೂಹದ ಮುಖ್ಯಸ್ಥ ಸುದೀಪ್ತೊ ಸೆನ್ ಅವರ ಕಾನೂನು ಸಲಹೆಗಾರ ನರೇಶ್ ಬಲೋಡಿಯಾ ಅವರನ್ನೂ ಈ ಹಗರಣದ ಸಂಬಂಧ ಸಿಬಿಐ ಶುಕ್ರವಾರ ಬಂಧಿಸಿದೆ. ಪಿತೂರಿ, ವಂಚನೆ, ಹಣವನ್ನು ವರ್ಗಾಯಿಸಿದ ಆರೋಪದಲ್ಲಿ ನರೇಶ್ ಅವರನ್ನು ಬಂಧಿಸಲಾಗಿದೆ.
ಹಗರಣ ಕುರಿತು ಸುದೀಪ್ತೊ ಸೆನ್ ಸಿಬಿಐಗೆ ನೀಡಿದ್ದ ವಿವರಣೆ ಪತ್ರವನ್ನು ನರೇಶ್ ಬಲೋಡಿಯಾ ಬರೆದಿದ್ದರು ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಶಾರದಾ ಹಗರಣದಲ್ಲಿ ಈಗಾಗಲೇ ತೃಣಮೂಲ ಕಾಂಗ್ರೆಸ್ ಸಂಸದರಾದ ಕುನಾಲ್ ಘೋಷ್, ಸೃಂಜಯ ಬೋಸ್ ಅವರನ್ನು ಸಿಬಿಐ ಬಂಧಿಸಿದೆ.
ಧೈರ್ಯವಿದ್ದರೆ ಬಂಧಿಸಿ
ಮದನ್ ಮಿತ್ರಾ ಬಂಧನವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದು, ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ‘ಇದು ಕಾನೂನು ಬಾಹಿರ ಮತ್ತು ಅಸಾಂವಿಧಾನಿಕ ಕ್ರಮವಾಗಿದ್ದು, ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಾಶ ಮಾಡುವ ನಡೆ. ಇದೊಂದು ರಾಜಕೀಯ ಷಡ್ಯಂತ್ರ ಹಾಗೂ ಕೀಳುಮಟ್ಟದ ಸಂಚು. ನಮ್ಮ ಸರ್ಕಾರ ಇದನ್ನು ಖಂಡಿಸುತ್ತದೆ. ಧೈರ್ಯವಿದ್ದರೆ ನನ್ನನ್ನೂ ಬಂಧಿಸಿ’ ಎಂದು ಕೇಂದ್ರಕ್ಕೆ ಸವಾಲು ಎಸೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.