ನವದೆಹಲಿ: ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದ್ದ ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್, ‘ಬಿಜೆಪಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ನಿರ್ಮಿಸುವ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವವರೆಗೂ ಕಾಶ್ಮೀರ ಸಮಸ್ಯೆ ಬಗೆಹರಿಸಲಾಗದು ಎಂದು ಹೇಳಿದೆ.
ಕಳೆದ ಮೂರು ವರ್ಷಗಳಲ್ಲಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
‘ಬಿಜೆಪಿ ಕಾಶ್ಮೀರ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬಹದು ಎಂಬುದನ್ನು ನಂಬುತ್ತೇನೆ ಆದರೆ ಅದು ತನ್ನ ಹಿಂದೂ ರಾಷ್ಟ್ರ ನಿರ್ಮಾಣದ ಸಿದ್ದಾಂತವನ್ನು ಬದಲಾಯಿಸಿಕೊಳ್ಳುವವರೆಗೂ ಯಶ ಕಾಣಲಾಗದು. ಹಾಗಾಗಿ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ’ ಎಂದು ಅಯ್ಯರ್ ಅಭಿಪ್ರಾಯ ಪಟ್ಟಿದ್ದಾರೆ.
ಅಯ್ಯರ್ ಮಾತನ್ನು ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್, ‘ಕೇಂದ್ರ ಸರ್ಕಾರ ಕಾಶ್ಮೀರ ಸಮಸ್ಯೆ ಬಗೆಹರಿಸುವ ಮಾತನಾಡುತ್ತಿದೆಯೇ ಹೊರತು ಆ ನಿಟ್ಟಿನಲ್ಲಿ ಕೆಲಸಮಾಡುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಬಿಜೆಪಿಯವರಲ್ಲಿ ರೂಢೀಗತವಾದ ಎರಡು ಸಂಭಾಷಣೆಗಳಿವೆ. ಮೊದಲೆಯದು ಕಾಶ್ಮೀರ ಸಮಸ್ಯೆ ಬಹಳ ಹಿಂದಿನದಾಗಿದ್ದು, ಸಮಸ್ಯೆ ಬಗೆ ಹರಿಸಲು ಕಾನೂನಿನಲ್ಲಿ ತೊಡಕುಗಳಿವೆ. ಗಡಿ ಮತ್ತು ವಿದೇಶಾಂಗ ನೀತಿಗಳು ಸಮಸ್ಯೆ ಬಗೆಹರಿಸಲು ಅಡ್ಡಿಯಾಗಿವೆ ಎಂಬುದು. ಎರಡನೆಯದು, ಇದು ಖಂಡನೀಯವಾಗಿದ್ದು ತೀಕ್ಷ್ಣ ಪ್ರತಿಕ್ರಿಯೆ ನೀಡಲಾಗುವುದು ಎಂಬುದು’ ಎಂದು ಬಬ್ಬರ್ ಬಿಜೆಪಿಯನ್ನು ಕಿಚಾಯಿಸಿದ್ದಾರೆ.
ಜತೆಗೆ ಕೇಂದ್ರ ಸರ್ಕಾರ ಪಾಕಿಸ್ತಾನ ವಿಚಾರದಲ್ಲಿ ಸಮರ್ಥ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಸಿಕ್ಕಿಂನಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಕೇಂದ್ರ ಸಚಿವ ರಾಜ್ನಾಥ್ ಸಿಂಗ್, ‘ಕಾಶ್ಮೀರ, ಕಾಶ್ಮೀರಿಗಳು, ಕಾಶ್ಮೀರಿ ಭಾವನೆಗಳು ಭಾರತಕ್ಕೆ ಸೇರಿದವು. ನಮ್ಮ ಸರ್ಕಾರ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿದೆ. ಕಾಶ್ಮೀರ ನಮ್ಮದು, ಕಾಶ್ಮೀರದವರು ನಮ್ಮವರು. ಕಾಶ್ಮೀರಿ ಭಾವನೆಯೂ ನಮ್ಮದು’ ಎಂದು ಭಾವನಾತ್ಮಕವಾಗಿ ಮಾತನಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.