ADVERTISEMENT

ಬುಖಾರಿ ಮಗನ ಪಟ್ಟಾಭಿಷೇಕಕ್ಕೆ ಮೋದಿಗಿಲ್ಲ ಆಹ್ವಾನ

ಪಾಕ್‌ ಪ್ರಧಾನಿ ಷರೀಫ್‌ಗೆ ಆಮಂತ್ರಣ: ವಿವಾದ ಸೃಷ್ಟಿಸಿದ ದೆಹಲಿಯ ಶಾಹಿ ಇಮಾಮ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಮಗನನ್ನು ತಮ್ಮ ಸಹಾಯಕ­ನಾಗಿ ಮತ್ತು ಆ ಮೂಲಕ ಉತ್ತರಾಧಿಕಾರಿಯಾಗಿ ನೇಮಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸದೆ ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಆಹ್ವಾನಿಸುವ ಮೂಲಕ ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್‌ ಸೈಯದ್‌ ಅಹ್ಮದ್‌ ಬುಖಾರಿ ಅವರು ವಿವಾದ ಸೃಷ್ಟಿಸಿದ್ದಾರೆ.

ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಸಮಾಜ ಕಾರ್ಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ 19ರ ಶಬಾನ್‌ನನ್ನು ‘ನೈಬ್‌ ಶಾಹಿ ಇಮಾಮ್‌’ (ಉಪ ಇಮಾಮ್‌) ಎಂದು ಹೆಸರಿಸುವ ಕಾರ್ಯಕ್ರಮ ನವೆಂಬರ್‌ 22ರಂದು ನಡೆಯಲಿದೆ. ದೆಹಲಿಯ ಚಾರಿತ್ರಿಕ ಜಾಮಾ ಮಸೀದಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿದೇಶದ ಕೆಲವು ಧಾರ್ಮಿಕ ನಾಯಕರೂ ಭಾಗವಹಿಸುವ ನಿರೀಕ್ಷೆ ಇದೆ.
‘ಭಾರತ ಮತ್ತು ವಿದೇಶಗಳ ಹಲವು ರಾಜಕೀಯ ನಾಯಕರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡ­ಲಾಗಿದೆ.

ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರಿಗೆ ಆಹ್ವಾನ ನೀಡಿದ್ದೇನೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿಲ್ಲ. ಗುಜರಾತ್‌ ಗಲಭೆಗಳಿಗೆ ಸಂಬಂಧಿಸಿ ಮುಸ್ಲಿಮರು ಮೋದಿ ಅವರನ್ನು ಕ್ಷಮಿಸಿಲ್ಲ. ಹಾಗಾಗಿ ಆಹ್ವಾನ ನೀಡಿಲ್ಲ’ ಎಂದು ಬುಖಾರಿ ಹೇಳಿದ್ದಾರೆ. ಮೋದಿ ಅವರನ್ನು ಆಹ್ವಾನಿಸದಿರುವ ನಿರ್ಧಾರ­ವನ್ನು ಬುಖಾರಿ ಅವರು ಸಮರ್ಥಿಸಿಕೊಂಡಿದ್ದಾರೆ. ‘ಇದು ವೈಯಕ್ತಿಕ ಸಂಘರ್ಷ ಏನಲ್ಲ. ನಾವು ಅವರಿಗೆ ಇಷ್ಟ ಇಲ್ಲ. ಹಾಗಾಗಿ ನಮಗೂ ಅವರು ಇಷ್ಟ ಇಲ್ಲ. ಮುಸ್ಲಿಮರ ಹತ್ತಿರ ಬರುವ ಪ್ರಯತ್ನವನ್ನು ಮೋದಿ ಅವರು ಮಾಡಿಲ್ಲ’ ಎಂದು ಬುಖಾರಿ ಹೇಳಿದ್ದಾರೆ.

ಬಿಜೆಪಿ ಖಂಡನೆ: ಬುಖಾರಿ ಅವರ ನಿಲುವನ್ನು ಬಿಜೆಪಿ ಬಲವಾಗಿ ಖಂಡಿ­ಸಿದೆ. ಈ ನಿರ್ಧಾರ ದುರದೃಷ್ಟಕರ ಎಂದಿರುವ ಬಿಜೆಪಿ, ಈ ಮೂಲಕ ಅವರು ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದೆ. ಬಿಜೆಪಿ ಮುಖಂಡರಾದ ರಾಜನಾಥ್‌ ಸಿಂಗ್‌, ಹರ್ಷ­ವರ್ಧನ್‌, ಸಯ್ಯದ್‌ ಷಾನವಾಜ್ ಹುಸೇನ್‌  ಮತ್ತು ವಿಜಯ ಗೋಯಲ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌, ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.