ADVERTISEMENT

ಭ್ರಷ್ಟಾಚಾರ: ರಾಜಕೀಯ ಪಕ್ಷಗಳಿಗೆ ಫಲಿತಾಂಶ ಪಾಠ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:30 IST
Last Updated 8 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಭ್ರಷ್ಟಾಚಾರ ಮುಕ್ತ, ಉತ್ತಮ ಆಡಳಿತ ನಡೆಸುವ ವಿಷಯ­ದಲ್ಲಿ ಮತದಾರ ಈ ಚುನಾ­ವಣೆಯಲ್ಲಿ ಸ್ಪಷ್ಟ ಸಂದೇಶ ನೀಡಿದ್ದಾನೆ ಎಂದು ಹಲವು ಉದ್ಯಮಪತಿಗಳು ಅಭಿಪ್ರಾಯ­ಪಟ್ಟಿದ್ದಾರೆ.

‘ಭ್ರಷ್ಟಾಚಾರ ತಡೆಗಟ್ಟಿ ರಾಜಕೀಯ ನಾಯಕತ್ವ ಗಟ್ಟಿಗೊಳಿಸುವಲ್ಲಿ ವಿಫಲ­ವಾದ ಕಾಂಗ್ರೆಸ್‌ಗೆ ಮತದಾರ ಪಾಠ ಕಲಿಸಿದ್ದಾನೆ’ ಎಂದು ಕಿರಣ್‌ ಮುಜುಮ್‌­ದಾರ್‌ ಷಾ ಹೇಳಿದ್ದಾರೆ.

‘ಭ್ರಷ್ಟಚಾರದ ವಿರುದ್ಧ ಸಂಘರ್ಷಕ್ಕೆ  ಇಳಿದ ಆಮ್‌ ಆದ್ಮಿ ಪಾರ್ಟಿಗೆ ದೆಹಲಿಯ ಮತದಾರರು ಮಣೆ ಹಾಕಿದ್ದಾರೆ. ಭ್ರಷ್ಟಾ­ಚಾರದಿಂದ ಕೂಡಿದ ಆಡಳಿತ ವ್ಯವಸ್ಥೆ­ಯನ್ನು ಕಿತ್ತೆಸೆಯಲು ಜನ ಕಾಯು­ತ್ತಿದ್ದರು. ಪಾರದರ್ಶಕ ಹಾಗೂ ಜವಾ­ಬ್ದಾರಿ­ಯುತ ಆಡಳಿತ ಜನರಿಗೆ ಬೇಕಾ­ಗಿದೆ’ ಎಂದು ಷಾ ಟ್ವೀಟ್‌ ಮಾಡಿದ್ದಾರೆ.

ವಾಣಿಜ್ಯೋದ್ಯಮ ಮಹಾಸಂಘ  ‘ಅಸೋಚಾಂ’ ಅಭಿಪ್ರಾಯಪಟ್ಟಂತೆ, ‘ಈ ಫಲಿತಾಂಶಗಳು ಆಯಾ ರಾಜ್ಯ ಸರ್ಕಾರಗಳು ತೋರಿದ ಆಡಳಿತ ವೈಫಲ್ಯ­ವನ್ನು ಸ್ಪಷ್ಟವಾಗಿ ಹೇಳುತ್ತವೆ’ ಎಂದಿದೆ.

‘ಈ ಬಾರಿಯ ಚುನಾವಣೆಯಲ್ಲಿ ಫಲಿ­ತಾಂಶದ ಮೇಲೆ ಪರಿಣಾಮ ಬೀರುವ ಜಾತಿ ಹಾಗೂ ಧರ್ಮದ ಅಂಶಗಳಿಗೆ ಮತದಾರರು ಅಷ್ಟಾಗಿ ಗಮನಕೊಡದೆ ಉತ್ತಮ ಆಡಳಿತಕ್ಕೆ ಆದ್ಯತೆ ನೀಡಿದ್ದಾರೆ. ಬೆಲೆ ಏರಿಕೆ ವಿಷಯವೂ ಈ ಚುನಾವಣೆ­ಯಲ್ಲಿ ಮತದಾರರ ಮೇಲೆ ಗಾಢ ಪರಿಣಾಮ ಬೀರಿದೆ’ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ರಾವತ್‌ ತಿಳಿಸಿದ್ದಾರೆ.

‘ತರಕಾರಿ, ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಜನ ಆಕ್ರೋಶ ಗೊಂಡಿದ್ದು, ಇದು ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ’ ಎಂದು ಪಿಎಚ್‌ಡಿ ವಾಣಿಜ್ಯೋದ್ಯಮ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸೌರಭ ಸನ್ಯಾಲ್‌ ಹೇಳಿದರು.
‘ಮತದಾರರಿಗೆ ಪರ್ಯಾಯ ಮಾರ್ಗವೇ ಇರಲಿಲ್ಲ. ಹಾಗಾಗಿ ಎಎಪಿ ಈ ಚುನಾವಣೆಯಲ್ಲಿ ತನ್ನ ಶಕ್ತಿ ತೋರಿಸಿದೆ’ ಎಂದು ಬ್ಯಾಂಕ್‌ ಉದ್ಯೋಗಿ ಮೀರಾ ಸನ್ಯಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.