ಅನಂತಪುರ (ಪಿಟಿಐ): ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ವಿರುದ್ಧ ಇಲ್ಲಿನ ಸ್ಥಳೀಯ ನ್ಯಾಯಾಲಯ ಮಂಗಳವಾರ ಹಾಜರಾತಿ ವಾರಂಟ್ ಹೊರಡಿಸಿದೆ.
ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ಮೂರು ಸಲ ನೋಟಿಸ್ ನೀಡಿದ್ದರೂ, ದೋನಿ ಅವರು ಹಾಜರಾಗದ ಕಾರಣ ಅನಂತಪುರ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ಈ ವಾರಂಟ್ ಹೊರಡಿಸಿದ್ದಾರೆ. ಬಲಪಂಥೀಯ ಹಿಂದೂ ಸಂಘಟನೆಯೊಂದಕ್ಕೆ ಸೇರಿದ ಶ್ಯಾಂ ಸುಂದರ್ ಮತ್ತು ಗೋಪಾಲ್ ರಾವ್ ಎಂಬುವವರು ಈ ಸಂಬಂಧ ಅನಂತಪುರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
‘ಬ್ಯುಸಿನೆಸ್ ಟುಡೆ’ ಇಂಗ್ಲಿಷ್ ನಿಯತಕಾಲಿಕದ ಮುಖಪುಟದಲ್ಲಿ ದೋನಿ ವಿಷ್ಣುವಿನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಕೈಯಲ್ಲಿ ಶೂ ಸೇರಿದಂತೆ ತಾವು ಪ್ರತಿನಿಧಿಸುವ ವಿವಿಧ ಕಂಪೆನಿಗಳ ಜಾಹೀರಾತು ಉತ್ಪನ್ನಗಳನ್ನು ಹಿಡಿದಿದ್ದರು ಎಂಬುದು ವಿವಾದಕ್ಕೆ ಕಾರಣವಾಗಿತ್ತು.
ಇದು ಬಂಧನ ವಾರಂಟ್ ಅಥವಾ ಜಾಮೀನು ರಹಿತ ವಾರಂಟ್ ಅಲ್ಲ. ಹಾಜರಾತಿ ವಾರಂಟ್ ಮಾತ್ರ ಎಂದು ನಿಯತಕಾಲಿಕದ ಪರವಾಗಿ ಹಾಜರಾಗಿದ್ದ ವಕೀಲರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.