ರೋಹ್ಟಕ್: ಭಾರತದ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ ಅವರ ಅಪ್ಪನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಅಂಗಡಿಯಿಂದ ಹಣ ದೋಚಿದ ಘಟನೆ ನಡೆದಿದೆ.
ಶನಿವಾರ ರಾತ್ರಿ ಜೋಗಿಂದರ್ ಅವರ ಅಪ್ಪ 68ರ ಹರೆಯದ ಓಂ ಪ್ರಕಾಶ್ ಅವರು ರೋಹ್ಟಕ್ ಸಮೀಪದ ಕಥ್ಮಂಡಿಯಲ್ಲಿರುವ ತಮ್ಮ ಅಂಗಡಿಗೆ ಬಾಗಿಲು ಹಾಕಿ ಹೊರಡುವ ಹೊತ್ತಿಗೆ 20ರ ಹರೆಯದ ಇಬ್ಬರು ಯುವಕರು ಬಂದು ಸಿಗರೇಟ್ ಮತ್ತು ತಂಪು ಪಾನೀಯ ಖರೀದಿಸಿ ಹೋಗಿದ್ದರು. ಸ್ವಲ್ಪ ಹೊತ್ತಾದ ಮೇಲೆ ಮರಳಿ ಬಂದ ಅದೇ ಯುವಕರು ಓಂ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ.
ದೂರಿನಲ್ಲಿ ಏನಿದೆ?
ದುಷ್ಕರ್ಮಿಗಳು ಮೊದಲು ನನ್ನ ಜೇಬಿನಿಂದ ಹಣ ತೆಗೆಯಲು ಯತ್ನಿಸಿದರು. ಆಗ ನಾನು ಅದನ್ನು ತಡೆದೆ. ಅಷ್ಟೊತ್ತಿಗೆ ಒಬ್ಬ ಹುಡುಗ ಚಾಕು ತೋರಿಸಿ ನನ್ನ ಹೊಟ್ಟೆಗೆ ಇರಿಯಲು ಯತ್ನಿಸಿದ. ನಾನು ಅವನ ಕೈಯನ್ನು ಬಲವಂತವಾಗಿ ಹಿಡಿದುಕೊಂಡೆ. ಆಮೇಲೆ ಅವರಿಬ್ಬರು ನನ್ನ ಅಂಗಡಿಯೊಳಗೆ ಹೊಕ್ಕು ಅಲ್ಲಿಂದ ಸುಮಾರು ₹7,000 ನಗದು ದೋಚಿದರು.
ಅಷ್ಟೇ ಅಲ್ಲದೆ ಆ ದುಷ್ಕರ್ಮಿಗಳು ಓಂ ಪ್ರಕಾಶ್ ಅವರನ್ನು ಅಂಗಡಿಯೊಳಗೆ ನೂಕಿ ಹೊರಗಿನಿಂದ ಬೀಗ ಹಾಕಿ ಓಡಿ ಹೋಗಿದ್ದಾರೆ. ಓಂ ಪ್ರಕಾಶ್ ಅವರು ಮಗ ದೀಪಕ್ಗೆ ಕರೆ ಮಾಡಿದ್ದು, ಅವರು ಬಂದು ಬೀಗ ಮುರಿದು ಅಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೈಗೆ ಚಾಕು ತಾಗಿ ಗಾಯವಾಗಿತ್ತು, ಅವರನ್ನೀಗ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ದೀಪಕ್ ಹೇಳಿದ್ದಾರೆ.
ಓಂ ಪ್ರಕಾಶ್ ಅವರ ಆರೋಪ ಆಧರಿಸಿ ಹಲ್ಲೆ ನಡೆಸಿದ ಆಗಂತುಕರ ವಿರುದ್ಧ ಐಪಿಸಿ 342 ಮತ್ತು 379 ಬಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ಆರಂಭವಾಗಿದ್ದು, ಸಿಸಿಟಿವಿ ದೃಶ್ಯವಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.