ADVERTISEMENT

ಮುಂಬೈ ಬಸ್‌ ಮುಷ್ಕರ ಅಂತ್ಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ಮುಂಬೈ(ಪಿಟಿಐ): ಬೃಹನ್‌ಮುಂಬೈ ವಿದ್ಯುತ್‌  ಸರಬರಾಜು ಹಾಗೂ ಸಾರಿಗೆ (ಬೆಸ್ಟ್‌) ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು ಗಣಕೀಕೃತ ಸಂಚಾರ ವೇಳಾಪಟ್ಟಿ ಜಾರಿ ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು  ಬುಧವಾರ ವಾಪಸ್‌ ತೆಗೆದುಕೊಂಡರು.

ಚಾಲಕರು ಮತ್ತು ನಿರ್ವಾಹಕರು ಮಂಗಳವಾರ ದಿಢೀರ್‌ ಪ್ರತಿಭಟನೆ ಆರಂಭಿಸಿದ್ದರು.  ಪ್ರತಿಭಟನೆಯನ್ನು ತಕ್ಷಣವೇ ಕೈ ಬಿಟ್ಟು ಕೆಲಸಕ್ಕೆ ಹಾಜ­ರಾಗುವಂತೆ ಬಾಂಬೆ ಹೈಕೋರ್ಟ್‌ ಆದೇಶಿಸಿದ್ದರೂ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಆಡಳಿತ ಮಂಡಳಿ ಜತೆಗಿನ ಮಾತುಕತೆ ಬಳಿಕ ಕೊನೆಗೂ ಮುಷ್ಕರ ಕೈಬಿಟ್ಟರು.

ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಜೆ.ಎಸ್‌.ಸಹಾರಿಯಾ ಅವರು ಬೆಸ್ಟ್‌್  ಪ್ರಧಾನ ವ್ಯವಸ್ಥಾಪಕ ಓಂ ಪ್ರಕಾಶ್‌್ ಗುಪ್ತಾ ಜತೆ ಸಮಾಲೋಚನೆ ನಡೆಸಿದರು. ಇದರ ಫಲವಾಗಿ ಬಿಕ್ಕಟ್ಟು ಬಗೆಹರಿಯಿತು. ಚಾಲಕರು ಹಾಗೂ ನಿರ್ವಾಹಕರು ಕೆಲಸಕ್ಕೆ ಮರಳಲು ನಿರಾಕರಿಸಿದ್ದ ಕಾರಣ ಬುಧವಾರ ಕೂಡ ಬೆಸ್ಟ್‌್, ವಿಭಾಗೀಯ ಪೀಠದ ಮೊರೆ ಹೋಗಿತ್ತು.

‘ಆಡಳಿತ ಮಂಡಳಿ ಹಾಗೂ ಒಕ್ಕೂಟದ ಸದಸ್ಯರ ನಡುವಣ ಮಾತುಕತೆ ಬಳಿಕ ಮುಷ್ಕರ ಕೈಬಿಡಲಾಯಿತು’ ಎಂದು ಬೆಸ್ಟ್‌್ ಪರ ವಕೀಲ ಎಂ.ಪಿ.ಎಸ್‌.ರಾವ್‌್ ನಂತರದಲ್ಲಿ ಕೋರ್ಟ್‌ಗೆ ತಿಳಿಸಿದರು. ‘ಸಮಸ್ಯೆ ಬಗೆಹರಿದಿದೆ. ನೂತನ ವ್ಯವಸ್ಥೆ  ಜಾರಿಯನ್ನು ಜೂನ್‌್ 1ರ ವರೆಗೆ ಮುಂದೂಡಲಾಗಿದೆ’ ಎಂದು ರಾವ್‌್ ಹೇಳಿದರು.

‘ಹೈಕೋರ್ಟ್‌ ಆದೇಶಕ್ಕೆ ವಿರುದ್ಧ­ವಾಗಿ ನಿರಂತರವಾಗಿ ಪ್ರತಿಭಟನೆ ನಡೆಸಿ­ದರೆ ಸಿಬ್ಬಂದಿ ಮೇಲೆ ಮಹಾರಾಷ್ಟ್ರ ಅಗತ್ಯ ಸೇವೆಗಳು ಮತ್ತು ನಿರ್ವಹಣೆ ಕಾಯ್ದೆ(ಮೆಸ್ಮಾ)ಹೇರಲಾಗು­ವುದು’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದರು.
‘ಕಂಪ್ಯೂಟರ್‌ ಆಧಾರಿತ ವೇಳಾಪಟ್ಟಿ

ಅಳವಡಿಸಿ­ಕೊಳ್ಳುವುದರಿಂದ ಸಿಬ್ಬಂದಿಯ ಕಾರ್ಯದಕ್ಷತೆಯನ್ನು ಸರಿಯಾಗಿ ಬಳಸಿ­ಕೊಳ್ಳಬಹುದು. ಅಲ್ಲದೇ, ಸಂಸ್ಥೆಗೆ ವಾರ್ಷಿಕ ₨ 32 ಕೋಟಿ ಉಳಿತಾಯ­ವಾಗಲಿದೆ’ ಎಂದು ಓಂ ಪ್ರಕಾಶ್‌ ಗುಪ್ತಾ ಹೇಳಿದ್ದಾರೆ.

‘ಹೊಸ ನಿಯಮಕ್ಕೆ ಕೈಗಾರಿಕಾ ನ್ಯಾಯಾ­ಲಯ ಅನುಮೋದನೆ ನೀಡಿದೆ. ಕೆಲಸದ ಸಮಯಕ್ಕೆ ಸಂಬಂಧಿಸಿದಂತೆ  ಚಾಲಕರು ಹಾಗೂ  ನಿರ್ವಾಹಕರನ್ನು ದಾರಿತಪ್ಪಿಸಲಾಗುತ್ತಿದೆ’ ಎಂದು ಬೆಸ್ಟ್‌ ವಕ್ತಾರ ಹನುಮಂತ ಘೋಫ್ನೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.