ಪುದುಚೇರಿ (ಪಿಟಿಐ): ವೈದ್ಯಕೀಯ ಕಾಲೇಜಿನ ಪ್ರವೇಶದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿರುದ್ಧ ದನಿ ಎತ್ತಿರುವ ಕಾರಣಕ್ಕೆ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಅವರು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಆರೋಪಿಸಿದ್ದಾರೆ.
‘ತಮ್ಮ ವಿರುದ್ಧ ಕಿರಣ್ ಬೇಡಿ ವೃಥಾ ಆರೋಪ ಮಾಡಿದ್ದಾರೆ. ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗುವುದು’ ಎಂದು ನಾರಾಯಣ ಸ್ವಾಮಿ ಭಾನುವಾರ ಬೆಳಿಗ್ಗೆ ಹೇಳಿದ್ದರು. ಇದರ ಬೆನ್ನಲ್ಲೇ ಬೇಡಿ ಅವರು ಈ ಆರೋಪ ಮಾಡಿದ್ದಾರೆ.
’ ವೈದ್ಯಕೀಯ ಕಾಲೇಜಿನ ಪ್ರವೇಶದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಈಗಾಗಲೇ ಇಬ್ಬರು ಐಎಎಸ್ ಅಧಿಕಾರಿಗಳು ಸೇರಿದಂತೆ ಪುದುಚೇರಿ ಸರ್ಕಾರದ ಆರು ಅಧಿಕಾರಿಗಳ ವಿರುದ್ಧ ಸಿಬಿಐ, ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲು ಮಾಡಿದೆ. ಈ ಅಧಿಕಾರಿಗಳು ಹಗರಣದ ಪ್ರಮುಖ ಆರೋಪಿಗಳು ಎಂದು ಸಿಬಿಐ ಹೇಳಿದೆ. ಹೀಗಿರುವಾಗ ಲೆಫ್ಟಿನೆಂಟ್ ಗವರ್ನರ್ನಂಥ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರಿಗೆ ಮುಖ್ಯಮಂತ್ರಿಗಳು ಬೆದರಿಕೆ ಹಾಕುತ್ತಿರುವುದು ಬಹಳ ವಿಚಿತ್ರವಾಗಿದೆ’ ಎಂದು ಬೇಡಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.