ಮುಂಬೈ: ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಮಹಾರಾಷ್ಟ್ರದಾದ್ಯಂತ ಸ್ಥಾನಿಕ ವೈದ್ಯರು ನಡೆಸುತ್ತಿರುವ ಮುಷ್ಕರವನ್ನು ಕೈಬಿಡಬೇಕೆಂದು ಮಹಾರಾಷ್ಟ್ರ ಸ್ಥಾನಿಕ ವೈದ್ಯರ ಸಂಘ (ಎಂಎಆರ್ಡಿ) ಸೂಚಿಸಿದೆ.
‘ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ಹಾಗೂ ಭದ್ರತೆ ಒದಗಿಸುವ ವಿಚಾರವನ್ನು ಬಾಂಬೆ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ ಮತ್ತು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ’ ಎಂದು ಎಂಎಆರ್ಡಿ ಅಧ್ಯಕ್ಷ ಯಶೋವರ್ಧನ್ ಕಾಬ್ರ ತಿಳಿಸಿದ್ದಾರೆ.
‘ಕೆಲವೇ ವೈದ್ಯರು ಕರ್ತವ್ಯಕ್ಕೆ ಹಾಜ ರಾಗಿದ್ದಾರೆ. ಆಸ್ಪತ್ರೆಯ ಹೊರರೋಗಿ ವಿಭಾಗ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ’ ಎಂದು ಕೆಇಎಂ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಕಾನೂನು ಕ್ರಮ ಎಚ್ಚರಿಕೆ: ‘ಸ್ಥಾನಿಕ ವೈದ್ಯರು ಮುಷ್ಕರವನ್ನು ಕೈಬಿಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ’ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
‘ಮುಷ್ಕರ ನಿಲ್ಲಿಸಿ ಸ್ಥಾನಿಕ ವೈದ್ಯರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಸರ್ಕಾರ ಸುಮ್ಮನಿರುವುದಿಲ್ಲ. ಚಿಕಿತ್ಸೆ ಲಭಿಸದೆ ಯಾವುದೇ ರೋಗಿ ಸಾವನ್ನಪ್ಪಲು ನಾವು ಬಿಡುವುದಿಲ್ಲ’ ಎಂದು ತಿಳಿಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಲು ನಡ್ಡಾ ಮನವಿ: ‘ವೈದ್ಯರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಮನವಿ ಮಾಡಿದ್ದಾರೆ. ‘ಆಸ್ಪತ್ರೆಗಳಲ್ಲಿ ವೈದ್ಯರಿಗೆ ಭದ್ರತೆ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.