ADVERTISEMENT

ಮುಸ್ಲಿಮರತ್ತ ಸ್ನೇಹ ಹಸ್ತ ಚಾಚಿದ ಮೋದಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 19:30 IST
Last Updated 22 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ‘ಮುಸ್ಲಿಂ ಸಹೋದರರು ಸೇರಿದಂತೆ ದೇಶದ ಎಲ್ಲ ನಾಗರಿಕರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಳ್ಳು­ತ್ತೇನೆ’ ಎಂದು  ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.

ಎಬಿಪಿ ನ್ಯೂಸ್‌ ಚಾನೆಲ್‌ನ ಕಾರ್ಯಕ್ರಮದಲ್ಲಿ ಮಾತ­ನಾಡಿದ ಅವರು, ರಾಮಮಂದಿರ ಮತ್ತು ಏಕರೂಪ ನಾಗರಿಕ ಸಂಹಿತೆಯಂತಹ ವಿವಾದಾಸ್ಪದ ವಿಷಯಗಳನ್ನು ಸಂವಿ­ಧಾನದ ಚೌಕಟ್ಟಿನಲ್ಲಿ ಪರಿಹರಿಸಲಾ­ಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ. ‘ಎಲ್ಲ ಭಾರತೀಯರನ್ನು ಒಂದು ಎಂದು ಪರಿಗಣಿಸುತ್ತೇನೆ ಮತ್ತು ಮುಸ್ಲಿಮರು ಸೇರಿದಂತೆ ಸಮಾಜದ ಎಲ್ಲ ವರ್ಗ­ದವರನ್ನು ತಲುಪುವುದು ನನ್ನ ಜವಾಬ್ದಾರಿ­ಯಾಗಿದೆ’ ಎಂದಿದ್ದಾರೆ..

ಗುಜರಾತ್‌ ಮುಖ್ಯಮಂತ್ರಿ­ಯಾಗಿ­ರುವ ನಾನು ರಾಜ್ಯದ ಆರು ಕೋಟಿ ಜನರ ವಿಶ್ವಾಸ ಗಳಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇನೆ. ಈಗ ನನ್ನ ಮೇಲೆ ರಾಷ್ಟ್ರೀಯ ಹೊಣೆ­ಗಾರಿಕೆ ಇದೆ. ಹೀಗಾಗಿ 125 ಕೋಟಿ ಜನರ ವಿಶ್ವಾಸ ಗಳಿಸಲು ಎಲ್ಲ ರೀತಿಯಿಂದಲೂ ಶ್ರಮಿಸುತ್ತೇನೆ. ಇದು ನನ್ನ ಕರ್ತವ್ಯ ಮತ್ತು ನಾನು ಅದನ್ನು ಮಾಡುತ್ತೇನೆ’ ಎಂದೂ ಹೇಳಿದ್ದಾರೆ.

ಮುಸ್ಲಿಮರು ಸೇರಿದಂತೆ ಎಲ್ಲರನ್ನು ತಲುಪಲು ನೀವು ಪ್ರಯತ್ನಿಸಲಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ‘ನೀವು ಬಳಸುತ್ತಿರುವ ಪರಿಭಾಷೆಯ ಪ್ರಕಾರ ನಾನೆಂದೂ ಮುಂದುವರಿ­ಯುವುದಿಲ್ಲ. ಒಂದುವೇಳೆ ನೀವು ನನ್ನನ್ನು ಎಳೆದರೂ, ನಾನು ಅದನ್ನು ಮಾಡು­ವುದಿಲ್ಲ. ನಾನು ನನ್ನ ದೇಶದ ಜನರನ್ನು ಭೇಟಿಯಾಗುತ್ತೇನೆ. ದೇಶದ ಜನರೆಲ್ಲ ನನ್ನವರು, ನನ್ನ ಸಹೋದರರು ಎಂಬ ಒಂದೇ ಭಾಷೆ ನನಗೆ ಗೊತ್ತು. ನೀವು ನನ್ನ ಬಗ್ಗೆ ಏನಾದರೂ ಅಂದು­ಕೊಳ್ಳ­ಬಹುದು. ಆದರೆ, ನಾನು ಹಾಗಿಲ್ಲ’ ಎಂದಿದ್ದಾರೆ.

‘ಮೋದಿ ಅಭಿವೃದ್ಧಿಯ ಮುಖವಾಡ ಕಳಚಿ ಬಿದ್ದಿದೆ. ಅವರು ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುತ್ತಿದ್ದಾರೆ. ಕೋಮು ದ್ವೇಷದ ಭಾಷಣಗಳು ಪೂರ್ವ­ನಿರ್ಧರಿತ ಮತ್ತು ಸಂಚಿನ ಭಾಗ’ ಎಂದು  ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.