ADVERTISEMENT

ಯಾವುದೇ ದುಷ್ಕೃತ್ಯವೂ ಕಳಂಕವೇ: ಮೋದಿ

ಏಕತೆಯ ಮಂತ್ರ ಜಪಿಸಿದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 13:58 IST
Last Updated 1 ಡಿಸೆಂಬರ್ 2015, 13:58 IST

ನವದೆಹಲಿ (ಪಿಟಿಐ): ‘ಅಸಹಿಷ್ಣುತೆ’ ಕುರಿತು ವ್ಯಾಪಕ ಚರ್ಚೆಯ ನಡೆಯುತ್ತಿರುವ ನಡುವೆಯೇ ‘ದುಷ್ಕೃತ್ಯ’ದ ಯಾವುದೇ ಘಟನೆಯು ಸಮಾಜ ಹಾಗೂ ದೇಶಕ್ಕೆ ಕಳಂಕವೇ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಭಿಪ್ರಾಯಪಟ್ಟರು.

ಅಲ್ಲದೇ, ಏಕತೆ ಹಾಗೂ ಸಾಮರಸ್ಯ ಮಾತ್ರವೇ ರಾಷ್ಟ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಇರುವ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದರು.

ರಾಜ್ಯಸಭೆಯಲ್ಲಿ ಸಂವಿಧಾನ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ADVERTISEMENT

ಭಾರತದಂತಹ ವೈವಿಧ್ಯಮಯ ದೇಶದಲ್ಲಿ ‘ವಿಘಟನೆಗೆ ಸಾಕಷ್ಟು ನೆಪಗಳು’ ಸಿಗಬಹುದು. ಆದರೆ, ದೇಶವನ್ನು ಒಗ್ಗೂಡಿಸುವ ಮಾರ್ಗಗಳನ್ನು ಅನ್ವೇಷಿಸಬೇಕು ಎನ್ನುವ ಮೂಲಕ ‘ಏಕತೆ’ಯ ಮಂತ್ರ ಜಪಿಸಿದರು.

ರಾಜ್ಯಸಭೆಯಲ್ಲಿ ನಿರ್ಣಾಯಕ ಮಸೂದೆಗಳ‌ ಅಂಗೀಕಾರ ಬಾಕಿ ಉಳಿದಿರುವ ಕಾರಣ 40 ನಿಮಿಷಗಳ ಭಾಷಣದಲ್ಲಿ ಪ್ರಧಾನಿ ಅವರು ವಿರೋಧ ಪಕ್ಷಗಳ ವಿರುದ್ಧ ಮೃದು ಧೋರಣೆ ತೋರಿದಂತೆ ಕಂಡರು.

‘ಯಾರದೇ ವಿರುದ್ಧ ಯಾವುದೇ ದುಷ್ಕೃತ್ಯ ನಡೆದರೂ ಅದು ನಮ್ಮೆಲ್ಲರ ಮೇಲೆ, ಸಮಾಜ ಹಾಗೂ ದೇಶಕ್ಕೆ ಕಳಂಕವೇ. ಇದರಿಂದ ನಮಗೆ ನೋವಾಗಬೇಕು. ಅಂಥ ಘಟನೆ ನಡೆಯದಂತೆ ಎಚ್ಚವಹಿಸಬೇಕು’ ಎಂದರು.

ಆದರೆ, ಯಾವುದೇ ನಿರ್ದಿಷ್ಟ ಘಟನೆಗಳನ್ನು ಪ್ರಧಾನಿ ಅವರು ಪ್ರಸ್ತಾಪಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.