ಶ್ರೀನಗರ (ಐಎಎನ್ಎಸ್): ಬುದ್ಗಂ ಜಿಲ್ಲೆಯಲ್ಲಿ ನವೆಂಬರ್ 3ರಂದು ನಡೆದ ಇಬ್ಬರು ಯುವಕರ ಹತ್ಯೆ ಪ್ರಕರಣದಲ್ಲಿ 9 ಸೈನಿಕರು ತಪ್ಪಿತಸ್ಥರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಇವರನ್ನು ಸೇನಾ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಚೆತ್ತೆರ್ಗಾಮ್ ಪ್ರದೇಶದಲ್ಲಿ ನಡೆದ ಗೋಲಿಬಾರ್ಗೆ ಸಂಬಂಧಿಸಿದಂತೆ 53ನೇ ರಾಷ್ಟ್ರೀಯ ರೈಫಲ್ಸ್ನ ಅಧಿಕಾರಿಯೂ ಸೇರಿದಂತೆ ಒಂಬತ್ತು ಸೈನಿಕರು ತಪ್ಪೆಸಗಿದ್ದಾರೆ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಫೈಸಲ್ ಯುಸೂಫ್ ಭಟ್ ಮತ್ತು ಮೆಹರಜುದ್ದೀನ್ ದಾರ್ ಎಂಬ ಯುವಕರು ಕಾರಿನಲ್ಲಿ ತರಳುತ್ತಿದ್ದಾಗ ತಪಾಸಣಾ ಚೌಕಿಯಲ್ಲಿ ನಿಲ್ಲಿಸದೆ ಮುಂದೆ ಹೋಗಿದ್ದರಿಂದ ಗುಂಡು ಹಾರಿಸಲಾಗಿತ್ತು ಎಂದು ಈ ಮೊದಲು ಸೇನೆಯ ಮೂಲಗಳು ಹೇಳಿದ್ದವು.
ನಂತರ ಸಾರ್ವಜನಿಕರಿಂದ ಭಾರಿ ಪ್ರತಿಭಟನೆ ನಡೆದಿದ್ದರಿಂದ ಲೆ. ಜ. ಡಿ. ಎಸ್. ಹೂಡಾ ಅವರು ಸೈನಿಕರಿಂದ ತಪ್ಪಾಗಿದೆ ಎಂಬುದನ್ನು ಒಪ್ಪಿಕೊಂಡು ತನಿಖೆಗೆ ಆದೇಶಿಸಿದ್ದರು. ಯುವಕರತ್ತ ಗುಂಡು ಹಾರಿಸುವಾಗ ಸೈನಿಕರು ನಿಯಮಗಳನ್ನು ಪಾಲಿಸಿರಲಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.