ADVERTISEMENT

ರಾಜ್ಯಕ್ಕೆ ಪ್ರೊ.ಮಲ್ಹೋತ್ರಾ ನೇಮಕ ಸಂಭವ

ಮತ್ತಿಬ್ಬರು ರಾಜ್ಯಪಾಲರ ರಾಜೀನಾಮೆ?

​ಪ್ರಜಾವಾಣಿ ವಾರ್ತೆ
Published 24 ಜೂನ್ 2014, 19:30 IST
Last Updated 24 ಜೂನ್ 2014, 19:30 IST

ನವದೆಹಲಿ: ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ರಾಜ್ಯಪಾಲರಾದ ಬಿ.ವಿ.­ವಾಂಚೊ (ಗೋವಾ) ಮತ್ತು ಜಗನ್ನಾಥ ಪಹಾಡಿಯಾ (ಹರಿಯಾಣ) ಅವರು ಮಂಗಳವಾರ ಭೇಟಿಯಾ­ಗಿದ್ದರು. ಯುಪಿಎ ಸರ್ಕಾರದಿಂದ ನೇಮ­ಕ­ಗೊಂಡಿರುವ ಇವರಿಬ್ಬರು ರಾಜೀ­ನಾಮೆ ನೀಡಲು ಮುಂದಾಗಿ­ದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಬಜೆಟ್‌ ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಬಿಜೆಪಿಯ ಕೆಲವು ಹಿರಿಯ ನಾಯಕ­ರನ್ನು ರಾಜ್ಯಪಾಲರನ್ನಾಗಿ ನೇಮಿಸಲು ಕೇಂದ್ರ ಸರ್ಕಾರ ಬಯಸಿದೆ. ಈ ಪಟ್ಟಿ­ಯಲ್ಲಿ ಲಾಲ್‌ಜಿ ಟಂಡನ್‌ (ಉತ್ತರಾ­ಖಂಡ) ಮತ್ತು ಪ್ರೊ.ವಿ.ಕೆ.ಮಲ್ಹೋತ್ರಾ (ಕರ್ನಾಟಕ) ಅವರ ಹೆಸರು ಇದೆ. ಇದಕ್ಕೆ ಪೂರಕವಾಗಿ ಟಂಡನ್‌ ಅವರು ರಾಜನಾಥ್‌ ಸಿಂಗ್‌ ಅವರನ್ನು ಮಂಗಳ­ವಾರ ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಅತಿ ಗಣ್ಯರ ಸಂಚಾರಕ್ಕೆ ಬಳಸಲು ಉದ್ದೇಶಿಸಲಾಗಿದ್ದ ಹೆಲಿಕಾಪ್ಟರ್‌ ಖರೀದಿ ಹಗರಣದ ಸಂಬಂಧ ವಾಂಚೊ ಅವರನ್ನು ಸಿಬಿಐ ವಿಚಾರಣೆಗೆ ಗುರಿಪ­ಡಿಸುವ ಸಂಭವ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ರಾಜೀನಾಮೆ ನೀಡುವಂತೆ ಕೇಂದ್ರ ಸರ್ಕಾರ ಒತ್ತಡ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ. ವಾಂಚೊ ಅವರ ಅಧಿಕಾರಾವಧಿ 2017ರ ಮೇ ತಿಂಗಳವರೆಗೆ ಇದೆ.

ಪಹಾಡಿಯಾ ಮತ್ತು ಗೃಹ ಸಚಿವರ ಭೇಟಿ ‘ಔಪಚಾರಿಕ’ ಎಂದು ಮೂಲ­ಗಳು ಹೇಳಿವೆ. ಪಹಾಡಿಯಾ ಅವರ ಅಧಿಕಾರಾವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದೆ.

ನಾಗಾಲ್ಯಾಂಡ್ ರಾಜ್ಯಪಾಲ ಅಶ್ವನಿ ಕುಮಾರ್‌ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ. ನಾರಾಯಣನ್‌ ಅವರು ಪದತ್ಯಾಗ ಮಾಡುವುದಾಗಿ ಈಗಾಗಲೇ ಕೇಂದ್ರಕ್ಕೆ ತಿಳಿಸಿದ್ದಾರೆ.

ಹೆಲಿಕಾಪ್ಟರ್‌ ಖರೀದಿ ಹಗರಣ ಕುರಿತಂತೆ ನಾರಾಯಣನ್‌ ಅವರೂ ವಿಚಾರಣೆ ಎದುರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ರಾಜ್ಯಪಾಲರಾದ ಬಿ.ಎಲ್‌. ಜೋಷಿ (ಉತ್ತರ ಪ್ರದೇಶ), ಶೇಖರ್‌ ದತ್‌ (ಛತ್ತೀಸಗಡ) ಅವರಂತೆ ಇನ್ನೂ ಕೆಲವು ರಾಜ್ಯಪಾಲರು ರಾಜೀನಾಮೆ ನೀಡಲು ಮುಂದಾಗಬಹುದು ಎಂದೂ ಹೇಳಲಾ­ಗಿದೆ. ಇದಕ್ಕೆ ಇಂಬು ನೀಡುವಂತೆ ಕಳೆದ ವಾರದಿಂದೀಚೆಗೆ ಹಲವು ರಾಜ್ಯಪಾ­ಲರು ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.