ಕಣ್ಣೂರು/ಕೇರಳ (ಪಿಟಿಐ): ಖಾಲಿ ರೈಲೊಂದರ ಬೋಗಿಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚಿದ ಘಟನೆಯಲ್ಲಿ ತೀವ್ರ ಸುಟ್ಟಗಾಯಗಳಿಂದ ನರಳುತ್ತಿದ್ದ ಆಕೆ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.
ದೇಹದ ಶೇ 40ರಷ್ಟು ಭಾಗ ಸುಟ್ಟು ನರಳುತ್ತಿದ್ದ 41 ವರ್ಷದ ಫಾತಿಮಾ ಅವರು ಕೋಯಿಕ್ಕೊಡ್ನ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ರಾತ್ರಿ ಮೃತಪಟ್ಟರು. ತನಿಖೆ ನಡೆಸುತ್ತಿರುವ ಪೊಲೀಸರು ಶಂಕಿತ ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ.
ಸೋಮವಾರ ನಸುಕಿನ 4.40ರ ಸಮಯದಲ್ಲಿ ಈ ಘಟನೆ ನಡೆದಿತ್ತು. ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ವಿ.ಒ. ಮೋಹನನ್ ಅವರು ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.
ಘಟನೆ ನಂತರ ಪರಾರಿಯಾಗಿರುವ ಆರೋಪಿಯನ್ನು 23 ವರ್ಷದ ಯುವಕ ಎಂದು ಶಂಕಿಸಲಾಗಿದ್ದು, ಫಾತಿಮಾ ಮತ್ತು ಆತನ ನಡುವೆ ಹಣಕಾಸಿನ ವಿಚಾ-ರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿರ-ಬಹುದು ಎನ್ನಲಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿ-ಸಿರುವ ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತ್ತಾಲ ಅವರು, ರೈಲುಗಳಲ್ಲಿ ಮುಖ್ಯವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿಟಿವಿ ಮತ್ತು ಜಿಪಿಎಸ್-ನಂಥ ಅತ್ಯಾಧುನಿಕ ಸೌಕರ್ಯಗಳನ್ನು ಅಳವಡಿಸಬೇಕು ಎಂದು ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಅವರನ್ನು ಆಗ್ರಹಿಸಿದ್ದಾರೆ.
ಘಟನೆಯನ್ನು ದುರದೃಷ್ಟಕರ ಎಂದು ಕರೆದಿರುವ ಚೆನ್ನತ್ತಾಲ ಅವರು, ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ನೋವಿನಿಂದ ಕಿರುಚುತ್ತಿದ್ದ ಮಹಿಳೆ ಕಣ್ಣೂರು– ಎರ್ನಾಕುಲಂ ಎಕ್ಸ್ಪ್ರೆಸ್ ರೈಲಿನಿಂದ ಹೊರಗೆ ಓಡಿ ಬರುವುದನ್ನು ಇತರೆ ಪ್ರಯಾಣಿಕರು ಕಂಡು ಪೊಲೀಸ-ರಿಗೆ ಸುದ್ದಿ ಮುಟ್ಟಿಸಿದ್ದರು.
ಮಲಪ್ಪುರಂನ ಕೊಂಡೊಟ್ಟಿಯ-ವರಾದ ಫಾತಿಮಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.