ADVERTISEMENT

ಲಖ್ವಿಗೆ ಜಾಮೀನು ಭಾರತದ ಆಕ್ರೋಶ

ಮುಂಬೈ ದಾಳಿ ಪ್ರಮುಖ ಸಂಚುಕೋರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2014, 10:30 IST
Last Updated 19 ಡಿಸೆಂಬರ್ 2014, 10:30 IST

ಇಸ್ಲಾಮಾಬಾದ್‌/ನವದೆಹಲಿ (ಪಿಟಿಐ): ಮುಂಬೈನಲ್ಲಿ ೨೦೦೮ ರಲ್ಲಿ ನಡೆದ ಉಗ್ರರ ದಾಳಿ ಪ್ರಕರ­ಣದ ಆರೋಪಿ, ಲಷ್ಕರ್‌ –ಎ –ತಯಬಾ (ಎಲ್‌ಇಟಿ) ಕಾರ್ಯಾ­ಚರಣೆ ಮುಖ್ಯಸ್ಥ ಝಕಿವುರ್‌ ರೆಹಮಾನ್‌ ಲಖ್ವಿಗೆ ಪಾಕಿ­ಸ್ತಾನದ ವಿಶೇಷ ನ್ಯಾಯಾ­ಲಯ ಗುರು­ವಾರ ಜಾಮೀನು ನೀಡಿದೆ.

ಭಯೋತ್ಪಾದನಾ ಪ್ರಕರಣಗಳ ವಿಚಾ­ರಣಾ ನ್ಯಾಯಾ­ಲಯದ ಈ  ಆದೇಶಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪ­ಡಿಸಿದೆ. ಕೂಡಲೇ ಈ ಆದೇಶವನ್ನು ರದ್ದುಮಾಡ­ಬೇಕು ಎಂದೂ ಒತ್ತಾಯಿಸಿದೆ.

‘ಮುಂಬೈ ಮೇಲಿನ ದಾಳಿಯಲ್ಲಿ ಮುಗ್ಧ ಜನರು ಜೀವ ಕಳೆದು­ಕೊಂಡಿದ್ದರು. ಈ ಆದೇಶ­ವನ್ನು ಒಪ್ಪು­ವುದಕ್ಕೆ ಸಾಧ್ಯ­ವಿಲ್ಲ. ವಿಶ್ವ­ಸಂಸ್ಥೆಯ

ಭದ್ರತಾ ಮಂಡಳಿಯು ಲಖ್ವಿ­ಯನ್ನು ಅಂತರರಾಷ್ಟ್ರೀಯ ಉಗ್ರ ಎಂದು ಘೋಷಿ­ಸಿದೆ. ಇಂಥ ವ್ಯಕ್ತಿಗೆ ಜಾಮೀನು ಸಿಕ್ಕಿರುವುದು ದುರದೃಷ್ಟಕರ’ ಎಂದು ವಿದೇ­ಶಾಂಗ ಸಚಿವಾಲಯದ ವಕ್ತಾರ ಸೈಯದ್‌ ಅಕ್ಬರುದ್ದೀನ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

‘ಸೇನಾ ಕಾರ್ಯಾಚರಣೆಗೆ ಪ್ರತೀಕಾರ­ವಾಗಿ ತಾಲಿಬಾನ್‌ ಬಂಡುಕೋರರು ಪೆಶಾ­ವರದ  ಶಾಲೆಯಲ್ಲಿ ಮಕ್ಕಳ ಹತ್ಯಾ­ಕಾಂಡ ಮಾಡಿ ಕೇವಲ ಎರಡು ದಿನಗಳು ಕಳೆಯುವಷ್ಟರಲ್ಲಿ ಲಖ್ವಿಗೆ ಜಾಮೀನು ಸಿಕ್ಕಿದೆ. ಹೇಯ ಕೃತ್ಯ ಎಸಗುವ ಉಗ್ರರಿಗೆ ಇದರಿಂದ ಇನ್ನಷ್ಟು ಕುಮ್ಮಕ್ಕು ಸಿಕ್ಕಂತಾಗುತ್ತದೆ’ ಎಂದಿದ್ದಾರೆ.

‘ಲಖ್ವಿ ಜಾಮೀನು ರದ್ದುಪಡಿಸು­ವುದಕ್ಕೆ ಪಾಕಿಸ್ತಾನ ಸರ್ಕಾರ ತುರ್ತು ಕ್ರಮ­ಗಳನ್ನು ಕೈಗೊಳ್ಳಬೇಕು. ಭಯೋ­ತ್ಪಾದ­­ಕರ ವಿಷಯದಲ್ಲಿ ರಾಜಿ ಸಾಧ್ಯ­ವಿಲ್ಲ ಎನ್ನುವುದನ್ನು ಅದು ಅರ್ಥಮಾಡಿ­ಕೊಳ್ಳಬೇಕು’ ಎಂದು  ಕಟುವಾಗಿ ಹೇಳಿದ್ದಾರೆ.
 

ಕೋರ್ಟ್‌ ಆದೇಶಕ್ಕೆ ತೀಕ್ಷ್ಣ ಪ್ರತಿಕ್ರಿಯೆ ದಾಖಲಿಸಲು ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರ ಕಚೇರಿಗೆ ಸರ್ಕಾರ ಸೂಚಿಸಿದೆ.
ಭಾರತಕ್ಕೆ ಬೇಕಾಗಿರುವ ಉಗ್ರ ಲಖ್ವಿ ವಿರುದ್ಧ ಸಾಕಷ್ಟು ಪುರಾವೆಗಳು ಇರಲಿಲ್ಲ ಎಂದು ಪಾಕಿಸ್ತಾನ ಸರ್ಕಾರ ನೀಡಿದ ಹೇಳಿಕೆಯನ್ನು ಅಕ್ಬರುದ್ದೀನ್‌ ಆಕ್ಷೇಪಿಸಿದ್ದಾರೆ.

ಮುಂಬೈ ದಾಳಿ ಪ್ರಕರಣದಲ್ಲಿ ಪಾಕಿ­ಸ್ತಾನದ ಬಳಿ ಶೇ ೯೯ರಷ್ಟು ಪುರಾವೆ  ಇದೆ. ಇವುಗಳನ್ನು ಕೋರ್ಟ್‌ಗೆ ಒದಗಿ­ಸುವುದು ಅಲ್ಲಿನ ಸರ್ಕಾರದ ಹೊಣೆ­ಯಾಗಿದೆ ಎಂದೂ ಅವರು ಹೇಳಿದ್ದಾರೆ.

ಮುಂಬೈ ದಾಳಿಗೆ ಸಂಚು ನಡೆದಿದ್ದು ಪಾಕಿಸ್ತಾನದಲ್ಲಿ. ಸಂಚುಕೋರರು, ದಾಳಿ­ಕೋರರು ಅಲ್ಲಿನವರೇ.  ದಾಳಿ ನಡೆ­ಸಿದ ಎಲ್ಲ ಉಗ್ರರಿಗೂ ಪಾಕಿಸ್ತಾನ­ದಲ್ಲಿಯೇ ತರಬೇತಿ ನೀಡ­ಲಾಗಿತ್ತು. ಇಡೀ ಪ್ರಕರಣಕ್ಕೆ ಹಣಕಾಸು ನೆರವು ಹರಿದುಬಂದಿದ್ದು ಕೂಡ ಪಾಕಿಸ್ತಾನ­ದಿಂದಲೇ ಎನ್ನುವುದನ್ನು ಮರೆಯು­ವಂತಿಲ್ಲ ಎಂದು ಅಕ್ಬರುದ್ದೀನ್‌ ತಿಳಿಸಿದ್ದಾರೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.