ನವದೆಹಲಿ: ಸಾಮಾನ್ಯವಾಗಿ ವಿದೇಶಗಳಿಗೆ ತೆರಳುವ ವಿಜ್ಞಾನ ನಿಯೋಗದ ನೇತೃತ್ವವನ್ನು ಸಚಿವರು ವಹಿಸುತ್ತಾರೆ. ಇದು 60 ವರ್ಷಗಳಿಂದಲೂ ನಡೆದು ಬಂದ ಸಂಪ್ರದಾಯ. ಆದರೆ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಈ ಸಂಪ್ರದಾಯ ಮುರಿದಿದೆ. ವಿದೇಶಕ್ಕೆ ತೆರಳುವ ವೈಜ್ಞಾನಿಕ ನಿಯೋಗದ ನೇತೃತ್ವವನ್ನು ಹೆಸರಾಂತ ವಿಜ್ಞಾನಿಗಳು ವಹಿಸಬೇಕೇ ಹೊರತೂ ಸಚಿವರಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದೆ.
ಇಂತಹ ಪ್ರವಾಸಗಳು ರಾಜಕೀಯ ನಾಯಕರಿಗೆ ವಿಹಾರ ಆಗಬಾರದು. ವಿಜ್ಞಾನಿಗಳು ಇದರಿಂದ ಹೆಚ್ಚು ಪ್ರಯೋಜನ ಪಡೆಯಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಈ ನಿಲುವು ತಳೆದದಿದೆ.
‘ನಮ್ಮ ಈ ನಿರ್ಧಾರದಿಂದ ವಿಜ್ಞಾನಿಗಳಿಗೆ ಹೆಚ್ಚು ಪ್ರಯೋಜನವಾಗಲಿದೆ. ಅವರು ವಿದೇಶ ಅಥವಾ ದೇಶದಲ್ಲಿ ತಮ್ಮ ಸಹೋದ್ಯೋಗಿಗಳ ಜತೆ ಸಮಾಲೋಚನೆ ನಡೆಸುವುದಕ್ಕೆ ಅವಕಾಶ ಮಾಡಿಕೊಡುವುದು ನಮ್ಮ ಉದ್ದೇಶ. ಇದರಿಂದ ದೇಶಕ್ಕೆ ಪ್ರಯೋಜನವಾಗಲಿದೆ’ ಎಂದು ವಿಜ್ಞಾನ ಹಾಗೂ ತಂತ್ರಜ್ಞಾನ, ಭೂವಿಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
‘ಸ್ಯಾಂಟಿಯಾಗೊ ಹಾಗೂ ಬಾಸ್ಟನ್ನಲ್ಲಿ ನಡೆಯಲಿರುವ ಎರಡು ಅಂತರರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಿಗೆ ವಿಜ್ಞಾನಿಗಳನ್ನು ಪ್ರತಿನಿಧಿಗಳನ್ನಾಗಿ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದೂ ತಿಳಿಸಿದ್ದಾರೆ.
‘ವಿಜ್ಞಾನವನ್ನು ಈ ದೇಶದಲ್ಲಿ ಸಾಮಾಜಿಕ ಬದಲಾವಣೆಗೆ ಬಳಸಿಕೊಳ್ಳಬೇಕು ಎನ್ನುವುದು ನಮ್ಮ ಆಸೆ. ವಿಜ್ಞಾನ ಸಮಾಜ ಸ್ನೇಹಿಯಾಗಬೇಕು ಎನ್ನುವುದು ನಮ್ಮ ಹಂಬಲ’ ಎಂದೂ ಸಚಿವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.