ಬಿಲಾಸ್ಪುರ: ರಾಜಸ್ಥಾನದ ಸ್ವಯಂಘೋಷಿತ ದೇವಮಾನವ ಸ್ವಾಮಿ ಕುಶಲೇಂದ್ರ ಪ್ರಪನ್ನಾಚಾರಿ ಫಲಹರಿ ಮಹಾರಾಜ್ (70), ಬಿಲಾಸ್ಪುರ ಜಿಲ್ಲೆಯ 21 ವರ್ಷದ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ 11ರಂದು ಮಹಿಳಾ ಪೊಲೀಸ್ ಠಾಣೆಗೆ ವಿದ್ಯಾರ್ಥಿನಿ ಪೋಷಕರು ದೂರು ನೀಡಿದ್ದು, ದೇವಮಾನವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬಿಲಾಸ್ಪುರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರ್ಚನಾ ಝಾ ತಿಳಿಸಿದ್ದಾರೆ.
ರಾಜಸ್ಥಾನದ ಅಲ್ವಾರದಲ್ಲಿರುವ ಮಧುಸೂದನ ಆಶ್ರಮದಲ್ಲಿ ಕಳೆದ ಆಗಸ್ಟ್ 7ರಂದು ಘಟನೆ ನಡೆದಿದೆ. ವಿದ್ಯಾರ್ಥಿನಿ ಪೋಷಕರು ದೇವಮಾನವನ ಅನುಯಾಯಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ದೇವಮಾನವನ ಶಿಫಾರಸು ಮೇರೆಗೆ ಮಹಿಳೆ ನವದೆಹಲಿಯ ಹಿರಿಯ ವಕೀಲರ ಬಳಿ ಕೆಲಸಕ್ಕೆ ಸೇರಿಕೊಂಡಿದ್ದರು. ₹3 ಸಾವಿರ ವೇತನ ಪಡೆಯುತ್ತಿದ್ದರು. ವೇತನವನ್ನು ಆಶ್ರಮಕ್ಕೆ ನೀಡುವಂತೆ ಪೋಷಕರು ತಿಳಿಸಿದ್ದರಿಂದ ರಕ್ಷಾಬಂಧನ ದಿವಸ ಮಹಿಳೆ ಆಶ್ರಮಕ್ಕೆ ತೆರಳಿದ್ದರು. ರಾತ್ರಿ ಆಶ್ರಮದಲ್ಲಿಯೇ ಉಳಿಯಲು ಹೇಳಿದ ದೇವಮಾನವ ಮಹಿಳೆಯನ್ನು ತನ್ನ ಕೊಠಡಿಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿದ್ದಾರೆ.
ವಿಷಯವನ್ನು ಯಾರಿಗೂ ತಿಳಿಸದಂತೆ ಮಹಿಳೆಗೆ ದೇವಮಾನವ ಬೆದರಿಕೆ ಹಾಕಿದ್ದ. ಮನೆಗೆ ಬಂದ ನಂತರ ಮಹಿಳೆ ತನ್ನ ಪೋಷಕರಿಗೆ ಘಟನೆ ಬಗ್ಗೆ ವಿವರಿಸಿದ್ದಾರೆ.
ದೇವಮಾನವನ ವಿರುದ್ಧ ಕಲಂ 376 (ಅತ್ಯಾಚಾರ), ಮತ್ತು ಕಲಂ 506 (ಬೆದರಿಕೆ) ಅಡಿ ಪ್ರಕರಣ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.