ಬೆಂಗಳೂರು (ಪಿಟಿಐ): ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಶನಿವಾರ ವ್ಯಾಪಕ ಬಿಗಿಭದ್ರತೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
18 ವರ್ಷಗಳಷ್ಟು ಹಿಂದಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪುನ್ನು ವಿಶೇಷ ನ್ಯಾಯಾಲಯ ಇಂದು (ಶನಿವಾರ, ಸೆಪ್ಟೆಂಬರ್ 27) ಪ್ರಕಟಿಸಲಿದ್ದು, ಜಯಲಲಿತಾ ಅವರ 'ಭವಿಷ್ಯ' ನಿರ್ಧಾರವಾಗಲಿದೆ.
ತಮ್ಮ ಆಪ್ತರಾದ ಶಶಿಕಲಾ ನಟರಾಜನ್ ಹಾಗೂ ಇಳವರಸಿ ಅವರೊಂದಿಗೆ ವಿಶೇಷ ವಿಮಾನದಲ್ಲಿ ಜಯಲಲಿತಾ ಅವರು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಬಳಿಕ ಕಾರಿನಲ್ಲಿ ನ್ಯಾಯಾಲಯಕ್ಕೆ ತೆರಳಿದರು.
ಜಯಲಲಿತಾ 1991ರಿಂದ 1996ರವರೆಗೆ ಮೊದಲ ಸಲ ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆದಾಯ ಮೀರಿ ₨ 66 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣ ಅನೇಕ ರಾಜಕೀಯ ಮತ್ತು ಕಾನೂನು ತಿರುವುಗಳನ್ನು ಪಡೆದುಕೊಂಡಿದೆ. ಜಯಲಲಿತಾ ಅವರ ಒಂದು ಕಾಲದ ದತ್ತು ಪುತ್ರ ಸುಧಾಕರನ್ ಹಾಗೂ ಶಶಿಕಲಾ, ಅವರ ಸಂಬಂಧಿ ಇಳವರಸಿ ಈ ಪ್ರಕರಣದ ಉಳಿದ ಆರೋಪಿಗಳಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.