ನವದೆಹಲಿ: ಖಾಸಗಿ ವೈದ್ಯಕೀಯ ಕಾಲೇಜು ಸೀಟು ಹಂಚಿಕೆ ಹಗರಣ ಸಂಬಂಧ ಒಡಿಶಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸೇರಿದಂತೆ ಐದು ಮಂದಿ ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಇಶ್ರತ್ ಮಸ್ರೂರ್ ಖುದ್ದುಸಿ, ಮಧ್ಯವರ್ತಿಗಳಾದ ಬಿಸ್ವನಾಥ್ ಅಗರ್ವಾಲ್, ರಾಮ್ ದೇವ್ ಸಾರಸ್ವತ್, ಲಖನೌನ ಪ್ರಸಾದ್ ಎಜುಕೇಶನ್ ಟ್ರಸ್ಟ್ನ ಮಾಲೀಕರಾದ ಬಿ.ಪಿ. ಯಾದವ್ ಮತ್ತು ಪಲಾಶ್ ಯಾದವ್ ಅವರನ್ನು ಬಂಧಿಸಲಾಗಿದೆ.
ಈ ಐದು ಮಂದಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಬಳಿಕ ಸಿಬಿಐ ಅಧಿಕಾರಿಗಳು ದೆಹಲಿ, ಲಖನೌ, ಭುವನೇಶ್ವರದಲ್ಲಿರುವ ಈ ಆರೋಪಿಗಳಿಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ಬುಧವಾರ ದಾಳಿ ನಡೆಸಿ ₹1.91 ಕೋಟಿ ನಗದು ಹಾಗೂ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.
ವೈದ್ಯಕೀಯ ಸೀಟು ಹಂಚಿಕೆ ಹಗರಣದಲ್ಲಿ ಭಾಗಿಯಾದ ಆರೋಪದ ಜತೆಗೆ ಈ ಪ್ರಕರಣವನ್ನು ಸುಪ್ರೀಂಕೋರ್ಟ್ನಲ್ಲಿ ಮುಚ್ಚಿಹಾಕಲು ಪ್ರಯತ್ನ ನಡೆಸಿದ ಆರೋಪವೂ ಇಶ್ರತ್ ಮಸ್ರೂರ್ ಖುದ್ದುಸಿ ಅವರ ಮೇಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.