ನವದೆಹಲಿ: ಜನತಾ ಪರಿವಾರದಲ್ಲಿ ಮತ್ತೊಂದು ಬಿರುಕು ಮೂಡಿದ್ದು, ಜೆಡಿಯು ಬಂಡಾಯ ಗುಂಪಿನ ನಾಯಕ ಶರದ್ ಯಾದವ್ ಅವರು ಮೇ 18ರಂದು ನೂತನ ಪಕ್ಷ ಘೋಷಿಸುವ ಸಂಭವ ಇದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತು ವಿರೋಧ ಪಕ್ಷಗಳಲ್ಲಿ ಭಾರಿ ನಿರೀಕ್ಷೆ ಇದೆ. ಫಲಿತಾಂಶ ಬಂದ ಬಳಿಕ ನಡೆಯಲಿರುವ ಕಾರ್ಯಕ್ರಮದಲ್ಲಿ ವಿರೋಧ ಪಕ್ಷಗಳ ಹಲವು ಪ್ರಮುಖ ನಾಯಕರು ಭಾಗಿಯಾಗಬಹುದು ಎಂದು ಶರದ್ ಯಾದವ್ ಬಣದ ಪ್ರಧಾನ ಕಾರ್ಯದರ್ಶಿ ಜಾವೇದ್ ರಾಜಾ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪಕ್ಷದ ಚಿಹ್ನೆಯ ವಿಷಯದಲ್ಲಿ ಚುನಾವಣಾ ಆಯೋಗ ನಿತೀಶ್ ಕುಮಾರ್ ಪರವಾಗಿ ತೀರ್ಪು ನೀಡಿ ಅವರ ಪಕ್ಷವನ್ನು ಜೆಡಿಯು ಎಂದು ಗುರುತಿಸಿತ್ತು. ಇದಾದ ಬಳಿಕ ಬಂಡಾಯ ಎದ್ದ ಯಾದವ್, ನೂತನ ಪಕ್ಷ ನೋಂದಣಿ ಮಾಡುವುದಕ್ಕೆ ಮುಂದಾಗಿದ್ದರು. ಅಪ್ನಾ ಜನತಾ ದಳ, ಲೋಕತಾಂತ್ರಿಕ ಜನತಾ ದಳ, ಲೋಕ ಶಾಹಿ ಜನತಾ ದಳ, ಸಮಾಜವಾದಿ ಜನತಾ ಹಾಗೂ ಜನತಾಂತ್ರಿಕ ಜನತಾ ದಳ ಹೆಸರುಗಳ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು.
ಆಯೋಗ ಇನ್ನೊಂದು ವಾರದಲ್ಲಿ ನೂತನ ಪಕ್ಷದ ಹೆಸರನ್ನು ನೀಡಬಹುದು ಎಂದು ನಾಯಕರು ನಿರೀಕ್ಷಿಸುತ್ತಿದ್ದಾರೆ. ಇದಾದ ತಕ್ಷಣವೇ ಚುನಾವಣಾ ಚಿಹ್ನೆಗೂ ಅರ್ಜಿ ಸಲ್ಲಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.