ನವದೆಹಲಿ: ಪ್ರಚೋದನಕಾರಿ ಭಾಷಣಗಳಿಂದ ವಿವಾದಕ್ಕೆ ಗುರಿಯಾಗಿರುವ ನರೇಂದ್ರ ಮೋದಿ ಅವರ ಆಪ್ತ ಅಮಿತ್ ಷಾ ಮತ್ತು ಸಮಾಜವಾದಿ ಪಕ್ಷದ ಅಜಂ ಖಾನ್ ಅವರಿಗೆ ಉತ್ತರ ಪ್ರದೇಶದಲ್ಲಿ ಯಾವುದೇ ಸಾರ್ವಜನಿಕ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ.
ಈ ಇಬ್ಬರು ಸಮಾಜದ ಸಮುದಾಯಗಳಲ್ಲಿ ದ್ವೇಷ ಕೆರಳಿಸುವಂತಹ ತೀವ್ರ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿರುವ ಬಗ್ಗೆ ಆಯೋಗ ಆತಂಕ ವ್ಯಕ್ತಪಡಿಸಿದೆ.
ಈ ಇಬ್ಬರು ಪಾಲ್ಗೊಳ್ಳುವ ಅಥವಾ ಪಾಲ್ಗೊಳ್ಳುವ ನಿರೀಕ್ಷೆ ಇರುವ ಯಾವುದೇ ಸಾರ್ವಜನಿಕ ಸಭೆ, ಬಹಿರಂಗ ಮೆರವಣಿಗೆ, ಸಾರ್ವಜನಿಕ ಸಭೆ, ಸಾರ್ವಜನಿಕ ರ್ಯಾಲಿ, ರಸ್ತೆ ಯಾತ್ರೆಗಳನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬಾರದು ಎಂದು ಆಯೋಗ ನಿರ್ದೇಶನ ನೀಡಿದೆ.
ಈ ಇಬ್ಬರ ವಿರುದ್ಧದ, ವಿಶೇಷವಾಗಿ ಅಜಂ ಖಾನ್ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ತಡ ಮಾಡುತ್ತಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸರ್ಕಾರವನ್ನು ಆಯೋಗ ಇದೇ ವೇಳೆ ತರಾಟೆಗೆ ತೆಗೆದುಕೊಂಡಿದೆ. ಈ ಇಬ್ಬರ ವಿರುದ್ಧ ಕ್ರಿಮಿನಲ್ ವಿಚಾರಣೆ ಆರಂಭಿಸುವಂತೆಯೂ ಆಯೋಗ ಸೂಚಿಸಿದೆ.
ರಾಂಪುರ ಎಂಬಲ್ಲಿ ಗುರುವಾರ ಚುನಾವಣಾ ಭಾಷಣದ ವೇಳೆ ಖಾನ್ ಅವರು ಮೋದಿ ವಿರುದ್ಧ ಅವಹೇಳನಕಾರಿ ಟೀಕೆ ಮಾಡಿರುವ ಸಂಬಂಧ ಆಯೋಗವು ಅವರಿಗೆ ಎರಡನೇ ಷೋಕಾಸ್ ನೋಟಿಸ್ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.