ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಪ್ರಯುಕ್ತ ಕ್ರಿಸ್ಮಸ್ ಹಬ್ಬದಂದು (ಡಿ.25ರಂದು) ‘ಉತ್ತಮ ಆಡಳಿತ ದಿನ’ ಆಚರಿಸಲು ನವೋದಯ ವಿದ್ಯಾಲಯ ಸಮಿತಿ ಹೊರಡಿಸಿರುವ ಸುತ್ತೋಲೆ ಸೋಮವಾರ ಸಂಸತ್ನಲ್ಲಿ ಭಾರಿ ಕೋಲಾಹಲಕ್ಕೆ ಎಡೆಮಾಡಿತು.
ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವಾಲಯ ವಿವಾದದ ಕೇಂದ್ರಬಿಂದುವಾಗಿ ಟೀಕೆಗೆ ಗುರಿಯಾಯಿತು. ಸಂಸತ್ನ ಎರಡೂ ಸಭೆಗಳ ಒಳಗೆ ಮತ್ತು ಹೊರಗೆ ವಿಷಯ ಪ್ರಸ್ತಾಪವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ, ತಕ್ಷಣ ಸ್ಪಷ್ಟೀಕರಣ ನೀಡುವಂತೆ ಮಾಡಿತು.
ನವೋದಯ ಸಮಿತಿ ಸೂಚನೆ ಸೂಕ್ತ ಸಿಬಿಎಸ್ಸಿ ಸುತ್ತೋಲೆ ಬರುವ ತನಕ ಕ್ರಿಸ್ಮಸ್ ದಿನದ ‘ಉತ್ತಮ ಆಡಳಿತ ದಿನಾಚರಣೆ’ಯನ್ನು ತಡೆಹಿಡಿಯುವಂತೆ ತನ್ನ ಎಲ್ಲ ಪ್ರಾದೇಶಿಕ ಅಧಿಕಾರಿಗಳಿಗೆ ನವೋದಯ ವಿದ್ಯಾಲಯ ಸಮಿತಿ ಸೋಮವಾರ ರಾತ್ರಿ ಸೂಚಿಸಿದೆ. ಈ ಸಂಬಂಧ ಸಿಬಿಎಸ್ಸಿ ಇನ್ನಷ್ಟೇ ತನ್ನ ಸುತ್ತೋಲೆ ಕಳುಹಿಸಬೇಕಿದ್ದು, ಆವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ಎಲ್ಲ ಪ್ರದೇಶಗಳ ಜಿಲ್ಲಾಧಿಕಾರಿಗಳಿಗೆ ಸಮಿತಿ ಆಯುಕ್ತ ಜಿ.ಎಸ್. ಬೊತ್ಯಾಲ್ ತಿಳಿಸಿದ್ದಾರೆ. |
ನವೋದಯ ವಿದ್ಯಾಲಯ ಸೇರಿದಂತೆ ದೇಶದ ಎಲ್ಲ ಶಾಲೆಗಳಿಗೂ ಡಿಸೆಂಬರ್ 25ರಂದು ಸಾರ್ವತ್ರಿಕ ರಜೆ ಇರುವುದರಿಂದ ಮುಚ್ಚಿರುತ್ತವೆ ಎಂದು ಸರ್ಕಾರ ಸ್ಪಷ್ಟಪಡಿಸಿತು. ಆದಿನ ಕ್ರಿಸ್ಮಸ್ ರಜೆ ಇದ್ದರೂ, ಉತ್ತಮ ಆಡಳಿತ ದಿನ ಆಚರಣೆಗೆ ಶಾಲೆಗಳು ತೆರೆದಿರುತ್ತವೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿತು.
ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಭಾರಿ ಗದ್ದಲ ಉಂಟಾಯಿತು. ಇದರಿಂದ ರಾಜ್ಯಸಭೆಯನ್ನು ಮೂರು ಬಾರಿ ಮುಂದೂಡಬೇಕಾಯಿತು. ಲೋಕಸಭೆಯಲ್ಲಿ ಸಚಿವ ವೆಂಕಯ್ಯ ನಾಯ್ಡು ಉತ್ತರಿಸಿ, ಕ್ರಿಸ್ಮಸ್ ದಿನ ಶಾಲೆಗಳು ತೆರೆದಿರಬೇಕೆಂದು ಸಿಬಿಎಸ್ಸಿ ಸುತ್ತೋಲೆ ಕಳುಹಿಸಿಲ್ಲ ಎಂದರು.
ನವೋದಯ ಶಾಲೆಗಳಿಗೆ ಈಗಾಗಲೇ ಕ್ರಿಸ್ಮಸ್ ರಜೆ ನೀಡಲಾಗಿದೆ. ವಸತಿ ಶಾಲೆಗಳು ತೆರೆದಿರಲಿದ್ದು ಅಲ್ಲಿನ ಮಕ್ಕಳು ಡಿ.25ರಂದು ನಡೆಯುವ ಆನ್ಲೈನ್ ಪ್ರಬಂಧ ಸ್ಪರ್ಧೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಇದು ಐಚ್ಛಿಕವಾಗಿದ್ದು ಅವರ ಇಚ್ಛೆಗೆ ವಿರುದ್ಧವಾಗಿ ಯಾವುದೇ ಒತ್ತಡ ಹೇರುವ ಪ್ರಶ್ನೆಯೇ ಇಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.