ADVERTISEMENT

ಸಾಧ್ವಿ ಪ್ರಾಚಿ, ಸಂಜೀವ್‌ ಬಲಿಯಾನ್‌ ವಿರುದ್ಧದ ದ್ವೇಷ ಭಾಷಣ ಪ್ರಕರಣ ಕೈಬಿಡಲಿದೆ ಯೋಗಿ ಸರ್ಕಾರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 3:01 IST
Last Updated 26 ಏಪ್ರಿಲ್ 2018, 3:01 IST
ಸಂಜೀವ್‌ ಬಲಿಯಾನ್‌ (ಎಡ ಚಿತ್ರ) ಮತ್ತು ಸಾಧ್ವಿ ಪ್ರಾಚಿ
ಸಂಜೀವ್‌ ಬಲಿಯಾನ್‌ (ಎಡ ಚಿತ್ರ) ಮತ್ತು ಸಾಧ್ವಿ ಪ್ರಾಚಿ   

ಲಖನೌ: ಉತ್ತರ ಪ್ರದೇಶದ ಮುಜಪ್ಫರ್‌ನಗರ ಮತ್ತು ಶಾಮ್ಲಿಯಲ್ಲಿ ನಡೆದಿದ್ದ ಕೋಮು ಗಲಭೆಗೂ ಮುನ್ನ ದ್ವೇಷ ಭಾಣ ಮಾಡಿದ್ದ ಆರೋಪಕ್ಕೆ ಸಂಬಂಧಿಸಿ ಸಾಧ್ವಿ ಪ್ರಾಚಿ, ಬಿಜೆಪಿ ಸಂಸದ ಸಂಜೀವ್‌ ಬಲಿಯಾನ್‌, ಮೂವರು ಬಿಜೆಪಿ ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಲು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮುಂದಾಗಿದೆ.

ಪ್ರಕರಣ ಹಿಂಪಡೆಯುವ ಬಗ್ಗೆ ಉತ್ತರ ಪ್ರದೇಶದ ಕಾನೂನು ಇಲಾಖೆ ಜನವರಿಯಲ್ಲಿ ಮುಜಪ್ಫರ್‌ ನಗರ ಮ್ಯಾಜಿಸ್ಟ್ರೇಟರಿಗೆ ಪತ್ರ ಬರೆದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮುಜಫ್ಫರ್‌ ನಗರದಲ್ಲಿ 2013ರಲ್ಲಿ ನಡೆದಿದ್ದ ಕೋಮು ಗಲಭೆಗೂ ಮುನ್ನ ಆಯೋಜಿಸಲಾಗಿದ್ದ ಮಹಾ ಪಂಚಾಯಯ್ತಿಯಲ್ಲಿ (ಸಭೆ) ಸಾಧ್ವಿ ಪ್ರಾಚಿ, ಬಿಜ್ನೋರ್‌ನ ಬಿಜೆಪಿ ಸಂಸದ ಕುನ್ವಾರ್ ಭರತೇಂದ್ರ ಸಿಂಗ್, ಮುಜಪ್ಫರ್‌ ನಗರದ ಸಂಸದ ಸಂಜೀವ್‌ ಬಲಿಯಾನ್‌, ಬಿಜೆಪಿ ಶಾಸಕರಾದ ಸಂಗೀತ್ ಸೋಮ್, ಉಮೇಶ್ ಮಲಿಕ್ ಮತ್ತು ಸುರೇಶ್ ರಾಣಾ ಭಾಗವಹಿಸಿದ್ದರು ಎನ್ನಲಾಗಿದೆ.

ADVERTISEMENT

ದ್ವೇಷ ಭಾಷಣ ಆರೋಪಕ್ಕೆ ಸಂಬಂಧಿಸಿ ಸಿಖೆರಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. 2013ರ ಆಗಸ್ಟ್ 31 ಮತ್ತು ಸೆಪ್ಟೆಂಬರ್‌ 7ರಂದು ಮಾಂಡೊರ್ ಪ್ರದೇಶದಲ್ಲಿ ಮಹಾ ಪಂಚಾಯಯ್ತಿ ಆಯೋಜಿಸಲಾಗಿತ್ತು. ಗೌರವ್ ಮತ್ತು ಸಚಿನ್ ಎಂಬುವವರ ಹತ್ಯೆಗೆ ಸಂಬಂಧಿಸಿ ಮಹಾ ಪಂಚಾಯ್ತಿ ಆಯೋಜಿಸಲಾಗಿತ್ತು (ಆಗಸ್ಟ್‌ 27ರಂದು ಶಹನವಾಜ್ ಖಾನ್ ಎಂಬುವವರ ಹತ್ಯೆಯಾಗಿದ್ದು, ನಂತರ ಗೌರವ್ ಹಾಗೂ ಸಚಿನ್‌ರನ್ನು ಹತ್ಯೆಯಾಗಿತ್ತು). ಈ ಮೂರು ಹತ್ಯೆಗಳು 2013ರ ಸೆಪ್ಟೆಂಬರ್ 7ರ ನಂತರದ ಕೋಮು ಗಲಭೆಗೆ ಕಾರಣವಾಗಿದ್ದವು.

ಪ್ರಕರಣ ಕೈಬಿಡುವ ವಿಚಾರವಾಗಿ ಮುಜಪ್ಫರ್ ನಗರ ಪೊಲೀಸರು ಇನ್ನೂ ಪ್ರತಿಕ್ರಿಯೆ ನೀಡದ ಕಾರಣ ಜಿಲ್ಲಾ ಮ್ಯಾಜಿಸ್ಟ್ರೇಟರು ಸರ್ಕಾರಕ್ಕೆ ವರದಿ ನೀಡಿಲ್ಲ ಎಂದು ಮೂಲಗಳನ್ನು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಮುಜಪ್ಫರ್ ನಗರ ಕೋಮು ಗಲಭೆಗೆ ಸಂಬಂಧಿಸಿದ 131 ಪ್ರಕರಣಗಳನ್ನು ಕೈಬಿಡುವ ಪ್ರಕ್ರಿಯೆಯನ್ನು ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಆರಂಭಿಸಿದ್ದು, ಇದರಲ್ಲಿ ಹತ್ಯೆಗೆ ಸಂಬಂಧಿಸಿದ 13 ಪ್ರಕರಣಗಳೂ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.