ADVERTISEMENT

ಸುಕ್ಮಾ ಜಿಲ್ಲೆಯಲ್ಲಿ ಯೋಧರ ಮೇಲೆ ನಡೆದ ನಕ್ಸಲ್ ದಾಳಿಯ ಹಿಂದೆ 'ಹಿದ್ಮಾ' ಕೈವಾಡ?

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 14:59 IST
Last Updated 25 ಏಪ್ರಿಲ್ 2017, 14:59 IST
ಹಿದ್ಮಾ
ಹಿದ್ಮಾ   

ರಾಯಪುರ: ಛತ್ತೀಸಗಡದ ದಕ್ಷಿಣ ಬಸ್ತರ್‌ ಪ್ರಾಂತ್ಯದ ಸುಕ್ಮಾ ಜಿಲ್ಲೆಯ ಕಾಲಾಪತ್ಥರ್ ಎಂಬಲ್ಲಿ ಸೋಮವಾರ ಮಧ್ಯಾಹ್ನ 12.25ಕ್ಕೆ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಮೇಲೆ ನಡೆದ ದಾಳಿಯ ಸೂತ್ರಧಾರನನ್ನು ಗುರುತಿಸಲಾಗಿದೆ. ನಕ್ಸಲರು ಹೊಂಚು ಹಾಕಿ ನಡೆಸಿದ ಈ ದಾಳಿಯಲ್ಲಿ 25 ಸಿಆರ್‌ಪಿಎಫ್‌ ಯೋಧರು ಸಾವಿಗೀಡಾಗಿದ್ದಾರೆ.

ಸಿಪಿಐ ಮಾವೋವಾದಿ ಸಶಸ್ತ್ರ ವಿಭಾಗ ಕಮಾಂಡರ್ ಆಗಿರುವ ಹಿದ್ಮಾ ಎಂಬಾತನೇ ಈ ದಾಳಿಯ ರೂವಾರಿ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಸುಕ್ಮಾ -ಬಿಜಾಪುರ್ ಪ್ರದೇಶಗಳಲ್ಲಿ ನಿಯೋಜನೆಯಾಗಿರುವ ಸಿಪಿಐ ಮಾವೋವಾದಿ ಒಂದನೇ ಬೆಟಾಲಿಯನ್‍ನ ನೇತೃತ್ವ ವಹಿಸಿದ್ದಾರೆ ಈ ಹಿದ್ಮಾ.

ADVERTISEMENT

25ರ ಹರೆಯದ ಹಿದ್ಮಾ, ಬಸ್ತರ್‍‍ನಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಹಲವಾರು ದಾಳಿಗಳ ಸೂತ್ರಧಾರರಾಗಿದ್ದಾರೆ. ಕಳೆದ ಮಾರ್ಚ್ 11 ರಂದು ನಡೆದ ದಾಳಿಯ ಹಿಂದೆಯೂ ಇವರದ್ದೇ ಕೈವಾಡ ಇದೆ ಎಂದು ಶಂಕಿಸಲಾಗುತ್ತಿದೆ.

2013ರಲ್ಲಿ ಜಿರಾಂ ವ್ಯಾಲಿಯಲ್ಲಿ ಕಾಂಗ್ರೆಸ್ ನೇತಾರರ ವಾಹನಗಳ ಮೇಲೆ ದಾಳಿ ನಡೆಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಹತ್ಯೆಗೈದ ಪ್ರಕರಣದಲ್ಲೂ ಇವರು ಭಾಗಿಯಾಗಿದ್ದರು.

ಹಿದ್ಮಾ ಅವರನ್ನು ಪತ್ತೆ ಮಾಡಿದವರಿಗೆ ₹40 ಲಕ್ಷ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿದೆ.

ಆದಾಗ್ಯೂ, 2017 ಜನವರಿಯಲ್ಲಿ ಸೇನಾಪಡೆ ನಡೆದ ಗುಂಡಿನ ಚಕಮಕಿಯಲ್ಲಿ ಹಿದ್ಮಾ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಆ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಹೇಳಲಾಗಿದೆ.

[related]

ಗೆರಿಲ್ಲಾ ಯುದ್ಧ ವಿದ್ಯೆ ಪ್ರವೀಣರಾದ ಹಿದ್ಮಾ, ಏಪ್ರಿಲ್ 2012ರಲ್ಲಿ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪೌಲ್ ಮೆನನ್ ಅಪಹರಣ ಪ್ರಕರಣದ ಆರೋಪಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.