ತಿರುವನಂತಪುರಂ: ಸೌರವಿದ್ಯುತ್ ಫಲಕ ಅವ್ಯವಹಾರ ಹಗರಣದ ಸಂಬಂಧ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿರುದ್ಧ ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ದಳ(ವಿಎಸಿಬಿ)ದಿಂದ ತನಿಖೆ ನಡೆಸಲು ಕೇರಳ ಸರ್ಕಾರ ಬುಧವಾರ ನಿರ್ಧರಿಸಿದೆ.
ನಿವೃತ್ತ ನ್ಯಾಯಮೂರ್ತಿ ಜಿ.ಶಿವರಾಜನ್ ನೇತೃತ್ವದ ಆಯೋಗ ಸೌರವಿದ್ಯುತ್ ಫಲಕ ಹಗರಣದ ಸಂಬಂಧ ಸೆಪ್ಟೆಂಬರ್ನಲ್ಲಿ ಸಲ್ಲಿಸಿದ್ದ ವರದಿ ಆಧರಿಸಿ ಮುಖ್ಯಮಂತ್ರಿ ಪಿನರಾಯಿ ವಿಜಯನ್ ತನಿಖೆಯ ನಿರ್ಧಾರ ಪ್ರಕಟಿಸಿದ್ದಾರೆ.
2013ರಲ್ಲಿ ಬೆಳಕಿಗೆ ಬಂದ ಹಗರಣದಲ್ಲಿ ಭಾಗಿಯಾಗಿರುವ ಕುರಿತು ಉಮ್ಮನ್ ಚಾಂಡಿ ಅವರ ಸಂಪುಟದಲ್ಲಿದ್ದ ತಿರುವಂಕೂರ್ ರಾಧಾಕೃಷ್ಣನ್, ಆರ್ಯಾದನ್ ಮೊಹಮ್ಮೆದ್, ಥಂಪನೂರ್ ರವಿ ಹಾಗೂ ಬೆನ್ನಿ ಬೆಹನನ್ ಸೇರಿ ಹಲವರ ವಿರುದ್ಧ ತನಿಖೆ ವಿಎಸಿಬಿ ನಡೆಸಲಿದೆ.
ಸೌರವಿದ್ಯುತ್ ಫಲಕ ಹಗರಣ: ಕೊಚ್ಚಿಯ ಕೊಟ್ಟಾರಕಾರ್ ಮೂಲದ ಸರಿತಾ ನಾಯರ್ ಎಂಬ ಮಹಿಳೆ ತನ್ನ ಮಾಜಿ ಪತಿ ಬಿಜು ರಾಧಾಕೃಷ್ಣನ್ ಜತೆಗೂಡಿ ಚಿತ್ತೂರಿನಲ್ಲಿ `ಟೀಮ್ ಸೋಲಾರ್ ರಿನಿವೆಬಲ್ ಎನರ್ಜಿ ಸಲ್ಯೂಷನ್' ಎಂಬ ಸಂಸ್ಥೆ ಹುಟ್ಟು ಹಾಕಿದ್ದಳು. ಸೌರವಿದ್ಯುತ್ ಮತ್ತು ಪವನ ವಿದ್ಯುತ್ ಯೋಜನೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ್ದಳು.
ಇದಕ್ಕಾಗಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಕಚೇರಿ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳನ್ನು ಬಳಸಿಕೊಂಡಿದ್ದಳು. ಹಗರಣದ ಸುಳಿ ಮುಖ್ಯಮಂತ್ರಿ ಕೊರಳಿಗೆ ಸುತ್ತಿಕೊಳ್ಳುತ್ತಲೇ ಅವರ ಕಚೇರಿಯ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ಸರಿತಾ, ಬಿಜು ಸೇರಿದಂತೆ ಶಾಲೂ ಎಂಬ ಟಿವಿ ನಟಿ, ಹಿರಿಯ ಅಧಿಕಾರಿಗಳು, ಮುಖ್ಯಮಂತ್ರಿ ಕಚೇರಿಯ ಟೆನ್ನಿ ಜೊಪ್ಪನ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ಸೌರ ವಿದ್ಯುತ್ ಯೋಜನೆಗಾಗಿ ಎಸ್ಸಿಒಎಸ್ಎಸ್ಎ ಎಜುಕೇಷನಲ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ನಿಂದ ಉಮ್ಮನ್ ಚಾಂಡಿ ಸೇರಿ ಇತರರು ₹1.60 ಕೋಟಿ ಪಡೆದಿದ್ದು, ಅದನ್ನು ವಾಪಸ್ ನೀಡುವಂತೆ ಕೋರಿ ಬೆಂಗಳೂರು ಮೂಲದ ಉದ್ಯಮಿ ಎಂ.ಕೆ.ಕುರುವಿಲ್ಲಾ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.