ADVERTISEMENT

ಸ್ಫೋಟ: ಇಬ್ಬರ ಖುಲಾಸೆ, ಒಬ್ಬನಿಗೆ 10 ವರ್ಷ ಜೈಲು

ಪಿಟಿಐ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ನವದೆಹಲಿ: 2005ರ ದೀಪಾವಳಿ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಒಬ್ಬನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಇಬ್ಬರನ್ನು ಖುಲಾಸೆಗೊಳಿಸಿದೆ.
 
ಮೊಹಮ್ಮದ್‌ ರಫೀಕ್‌ ಶಾ ಮತ್ತು ಮೊಹಮ್ಮದ್‌ ಹುಸೇನ್‌ ಫಝೀಲಿ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ಅಡಿಷನಲ್‌ ಸೆಷನ್ಸ್‌ ನ್ಯಾಯಾಧೀಶ ರಿತೇಶ್‌ ಸಿಂಗ್‌ ಗುರುವಾರ ಪ್ರಕಟಿಸಿದರು.
 
ಇನ್ನೊಬ್ಬ ಆರೋಪಿ ತಾರೀಖ್‌ ಅಹ್ಮದ್‌ ದಾರ್‌ ಉಗ್ರ ಸಂಘಟನೆ ಲಷ್ಕರ್ ಎ ತಯಬಾದ ಸದಸ್ಯನೆಂದು ಸಾಬೀತಾಗಿರುವುದರಿಂದ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿ 10 ವರ್ಷ ಜೈಲು ಶಿಕ್ಷೆ ವಿಧಿಸಿತು. ಆದರೆ ದಾರ್‌ ಈಗಾಗಲೇ 12ವರ್ಷಗಳನ್ನು ಬಂಧನದಲ್ಲಿ ಕಳೆದಿರುವುದರಿಂದ ಜೈಲಿನಿಂದ ಹೊರಬರಲಿದ್ದಾನೆ. ದಾರ್‌ ಸ್ಫೋಟ ಪ್ರಕರಣದಲ್ಲಿ ನೇರವಾಗಿ ಪಾಲ್ಗೊಂಡಿಲ್ಲ ಎಂದು ಕೋರ್ಟ್‌ ಹೇಳಿದೆ. 
 
2005ರ ಅಕ್ಟೋಬರ್ 29ರಂದು ನವದೆಹಲಿಯ ಸರೋಜಿನಿ ನಗರ, ಪಹರ್‌ಗಂಜ್ ಹಾಗೂ ಕಲ್ಕಜಿಯಲ್ಲಿ ಸರಣಿ ಬಾಂಬ್ ಸ್ಫೋಟ ನಡೆದು 67 ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ 225 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.