ADVERTISEMENT

ಹಲವೆಡೆ ಭೂಕಂಪನ: ಬೆದರಿದ ಜನ

​ಪ್ರಜಾವಾಣಿ ವಾರ್ತೆ
Published 21 ಮೇ 2014, 20:20 IST
Last Updated 21 ಮೇ 2014, 20:20 IST

ನವದೆಹಲಿ (ಪಿಟಿಐ): ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶ, ಚೆನ್ನೈ, ಆಂಧ್ರದ ಕರಾವಳಿ, ಪೂರ್ವ ಮತ್ತು ಉತ್ತರ ಭಾರತದ ಹಲವು ಪ್ರದೇಶ ಗಳಲ್ಲಿ ಮಂಗಳವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ ೬.೦ ಪ್ರಮಾಣದ ಭೂಕಂಪನ ಉಂಟಾಗಿದೆ. ಭೂಕಂಪದಿಂದ ಯಾವುದೇ ಹಾನಿ ಆಗಿರುವ ಬಗ್ಗೆ ತಕ್ಷಣಕ್ಕೆ ವರದಿಗಳು ಬಂದಿಲ್ಲ.

ಒಡಿಶಾದ ಪರದೀಪ್‌ನಿಂದ ಪೂರ್ವಕ್ಕೆ ೬೦ ಕಿ.ಮೀ. ದೂರದಲ್ಲಿ ಬಂಗಾಳ ಕೊಲ್ಲಿಯಲ್ಲಿ ೧೦ ಕಿ. ಮೀ. ಆಳದಲ್ಲಿ  ಕಂಪನದ ಕೇಂದ್ರವಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕರು ತಿಳಿಸಿದ್ದಾರೆ. ಕಂಪನ ರಾತ್ರಿ ೯.೫೨ರ ಹೊತ್ತಿಗೆ ಸಂಭವಿಸಿತು.

ಒಡಿಶಾ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳಿಂದ ಹೊರಗೋಡಿ ಬಂದರು. ಭುವನೇಶ್ವರದ ಕೆಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಲ್ಲಿನ ಬಹುಮಹಡಿ ಕಟ್ಟಡಗಳಿಂದ ಜನರು ಹೊರಗೋಡಿ ಬರುವ ನೂಕುನುಗ್ಗಲಿನಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕೆಲವೇ ಸೆಕೆಂಡ್‌ ಕಾಲ ಮಾತ್ರ ಕಂಪನ ಉಂಟಾದರೂ ಅದು ಜನರಲ್ಲಿ ಭೀತಿ ಮೂಡಿಸಿತು. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಸುಮಾರು ಹತ್ತು ಸೆಕೆಂಡ್‌ನಷ್ಟು ಹೊತ್ತು ಭೂಮಿ ಕಂಪಿಸಿತು ಎಂದು ಹೇಳಲಾಗಿದೆ. ತಮಿಳುನಾಡಿನ ನುಂಗಂಬಾಕ್ಕಂ, ಪೊರೂರು ಮುಂತಾದ ಸ್ಥಳಗಳಲ್ಲಿ ಜನರು ಕಂಪನದಿಂದಾಗಿ ಮನೆಗಳಿಂದ ಹೊರಗೋಡಿ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.