ನವದೆಹಲಿ(ಪಿಟಿಐ): ದಕ್ಷಿಣ ಕಾಶ್ಮೀರದ ಫುಲ್ವಾಮಾ ಜಿಲ್ಲೆಯಲ್ಲಿ ಮಂಗಳವಾರ ಉಗ್ರರೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಸೇನಾಧಿಕಾರಿ ಎಂ.ಎನ್. ರಾಯ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಗುರುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸೇನಾ ಮುಖ್ಯಸ್ಥ ದುಲ್ಬೀರ್ ಸಿಂಗ್ ಅವರು ಉಪಸ್ಥಿತರಿದ್ದು, ಅಂತಿಮ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಕುಶಾಲು ತೋಪಿನ ಗೌರವ ನೀಡಲಾಯಿತು. ನೂರಾರು ಜನ ಆಗಮಿಸಿ ಅಂತಿಮ ದರ್ಶನ ಪಡೆದರು.
ರಾಯ್ ಅವರ ಸಹೋದರ ಹಾಗೂ ಗೂರ್ಖ ರೈಫಲ್ಸ್ ನ ಡಿ.ಎನ್. ರಾಯ್ ಅವರು ಅಂತಿಮ ಕಾರ್ಯಗಳನ್ನು ನೆರವೇರಿಸಿದರು.
ರಾಷ್ಟ್ರೀಯ ರೈಫಲ್ ಯುನಿಟ್ ರೆಜೆಮೆಂಟ್ ನ ಸದಸ್ಯರು ಹಾಗೂ ಸೇನೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಜಮ್ಮು– ಕಾಶ್ಮೀರದ ತ್ರಾಲ್ ನಲ್ಲಿ ಉಗ್ರರೊಂದಿಗಿನ ಹೋರಾಟದಲ್ಲಿ ಮಂಗಳವಾರ (ಜ. 27) ರಾಯ್ ಮೃತಪಟ್ಟಿದ್ದರು. ಘಟನೆ ನಡೆಯುವ ಒಂದು ದಿನ ಮೊದಲಷ್ಟೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಯ್ ಅವರು ‘ಯೋಧ ಸೇವಾ’ ಗೌರವ ಪುರಸ್ಕೃತರಾಗಿದ್ದರು.
ಅಂತಿಮ ಸಂಸ್ಕಾರದ ವೇಳೆ ರಾಯ್ ಅವರ ಪತ್ನಿ ಹಾಗೂ ಇಬ್ಬರು ಪುತ್ರಿಯರು, ಪುತ್ರ ಉಪಸ್ಥಿತರಿದ್ದು ಗೌರವ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.