ಕೊಚ್ಚಿ (ಪಿಟಿಐ): ಐಪಿಎಲ್ ಕ್ರಿಕೆಟ್ ಸ್ಫಾಟ್ ಫಿಕ್ಸಿಂಗ್ ಹಗರಣದಲ್ಲಿ 2013ರಲ್ಲಿ ನಿಷೇಧಕ್ಕೆ ಒಳಗಾಗಿದ್ದ ಕ್ರಿಕೆಟಿಗ ಶ್ರೀಶಾಂತ್ ಮೇಲೆ ತಿಹಾರ್ ಜೈಲಿನಲ್ಲಿ ಕೊಲೆ ಯತ್ನ ನಡೆದಿತ್ತು ಎಂದು ಗಾಯಕ ಹಾಗೂ ಶ್ರೀಶಾಂತ್ ಭಾವ ಮಧು ಬಾಲಕೃಷ್ಣನ್ ದೂರಿದ್ದಾರೆ.
‘ತಿಹಾರ್ ಜೈಲಿನಲ್ಲಿದ್ದಾಗ ಶ್ರೀಶಾಂತ್ ಮೇಲೆ ಕೊಲೆ ಯತ್ನ ನಡೆದಿತ್ತು. ಬಾಗಿಲಿನ ಚಿಲಕವನ್ನೇ ಚೂಪಾದ ಆಯುಧವಾಗಿ ಮಾಡಿಕೊಂಡಿದ್ದ ರೌಡಿಯೊಬ್ಬ ಶ್ರೀಶಾಂತ್ ಕೊಲೆ ಮಾಡಲು ಯತ್ನಿಸಿದ್ದ. ಆದರೆ, ಅದೃಷ್ಟವಶಾತ್ ಶ್ರೀಶಾಂತ್ ಅದರಿಂದ ಪಾರಾಗಿದ್ದರು’ ಎಂದು ಬಾಲಕೃಷ್ಣನ್ ಮಲಯಾಳಂ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಬಾಲಕೃಷ್ಣನ್ ಅವರು ಶ್ರೀಶಾಂತ್ ಅವರ ಹಿರಿಯ ಸಹೋದರಿಯನ್ನು ಮದುವೆಯಾಗಿದ್ದಾರೆ. ತಿಹಾರ್ ಜೈಲಿನಲ್ಲಿದ್ದ ಅನುಭವದ ಮಾನಸಿಕ ಹಿಂಸೆಯಿಂದ ಭಾವ ಇನ್ನೂ ಪೂರ್ಣವಾಗಿ ಹೊರಬಂದಿಲ್ಲ ಎಂದು ಬಾಲಕೃಷ್ಣನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಘಟನೆಯ ಬಗ್ಗೆ ಶ್ರೀಶಾಂತ್ ಆಗಲಿ ಅಥವಾ ಅವರ ಕುಟುಂಬವಾಗಲಿ ಪೊಲೀಸರಿಗೆ ಯಾವುದೇ ದೂರನ್ನು ನೀಡಿಲ್ಲ ಎಂದೂ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.