ADVERTISEMENT

‘ಪರಿಸಮಾಪ್ತಿ ವರದಿಗೆ ಅವಸರವೇಕೆ?’

ಕಲ್ಲಿದ್ದಲು: ಕುಮಾರ ಮಂಗಲಂ ಬಿರ್ಲಾ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2014, 19:30 IST
Last Updated 12 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಉದ್ಯಮಿ ಕುಮಾರ ಮಂಗಲಂ ಬಿರ್ಲಾ ವಿರುದ್ಧದ ಪ್ರಕರಣ ಕೈಬಿಡಲು ಮುಂದಾಗಿರುವ ಸಿಬಿಐ ಅನ್ನು ಶುಕ್ರವಾರ ತರಾಟೆಗೆ ತೆಗೆದು­ಕೊಂಡ ವಿಶೇಷ ನ್ಯಾಯಾ­ಲಯ, ತರಾತುರಿ­ಯಲ್ಲಿ ಪರಿ­ಸಮಾಪ್ತಿ ವರದಿ ಸಲ್ಲಿಸಿರು­ವು­ದೇಕೆ ಎಂದು ಪ್ರಶ್ನಿಸಿದೆ.

‘ಈ ಪ್ರಕರಣವನ್ನು ಮುಕ್ತಾಯ­ಗೊಳಿಸಲು ಅವಸರಿಸುತ್ತಿರುವುದೇಕೆ? ಪ್ರಕರಣದ ವಿವರಗಳನ್ನು ಒಳಗೊಂಡ ಡೈರಿಯನ್ನು ಏಕೆ ಹಾಜರು ಮಾಡಿಲ್ಲ’ ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಭರತ್‌ ಪರಾಶರ್‌ ಅವರು ಈ ಪ್ರಕರಣದ ತನಿಖಾಧಿಕಾರಿ­ಯನ್ನು ಖಾರವಾಗಿ ಪ್ರಶ್ನಿಸಿದರು.

ಮತ್ತೆ ವಿಚಾರಣೆ: ‘ಸುಪ್ರೀಂ’ ನಕಾರ
ಕಾನೂನುಬಾಹಿರವಾಗಿ ಕಲ್ಲಿದ್ದಲು ನಿಕ್ಷೇಪಗಳ ಮಂಜೂರಾತಿ ಪಡೆದ ಕಂಪೆನಿಗಳು ಸಲ್ಲಿಸಿರುವ ಮರುಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಸುಪ್ರೀಂ ಕೋರ್ಟ್‌ ಈಗಾಗಲೇ 218 ಕಲ್ಲಿದ್ದಲು ನಿಕ್ಷೇಪ ಮಂಜೂರಾತಿ­ಗಳನ್ನು ಅಕ್ರಮ ಎಂದಿದ್ದು, ಈ ಕುರಿತ ತೀರ್ಪನ್ನು ಕಾಯ್ದಿರಿಸಿದೆ. ಈ ಮಧ್ಯೆ, ಇಂತಹ ಪರವಾನಗಿಗಳನ್ನು ರದ್ದು ಮಾಡುವುದಾಗಿ ಸರ್ಕಾರ ಕೂಡ ಹೇಳಿದೆ. ಆದರೆ, ಈ ಅಕ್ರಮಕ್ಕೆ ಸರ್ಕಾರ ಕಾರಣ ಎಂದಿರುವ ಕಂಪೆನಿಗಳು, ಕಾನೂನು­ಬಾಹಿರವಾಗಿ ನಡೆದಿರುವ ಪ್ರತಿಯೊಂದು ಮಂಜೂರಾತಿಯನ್ನು ಪರಿಶೀಲಿ­ಸಲು ಸಮಿತಿ ರಚಿಸುವಂತೆ ಒತ್ತಾಯಿಸಿವೆ.

‘ಬಿರ್ಲಾ ಅವರ ಒಡೆತನದ ಹಿಂಡಾಲ್ಕೊ ಕಂಪೆನಿ ಕಲ್ಲಿದಲು ನಿಕ್ಷೇ­ಪದ ಮಂಜೂರಾತಿಗೆ ಕೋರಿ ಸಲ್ಲಿಸಿದ್ದ ಅರ್ಜಿ ಕುರಿತ ಪರಿಶೀಲನಾ ಸಮಿತಿಯ ಮೂಲ ಟಿಪ್ಪಣಿ ನಾಪತ್ತೆಯಾಗಿದೆ’ ಎಂದು ತನಿಖಾಧಿಕಾರಿ ವಿಚಾರಣೆ ವೇಳೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿ­ಸಿದ ನ್ಯಾಯಾಧೀಶರು, ‘ಹಾಗಿದ್ದರೆ ಮೂಲ ಟಿಪ್ಪಣಿ ನಾಪತ್ತೆಯಾಗಿ­ರುವು­ದಕ್ಕೆ ಯಾವುದಾದರು  ಹೇಳಿಕೆಗಳು ಇವೆಯೇ’ ಎಂದು  ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ತತ್ತರಿಸಿದ ತನಿಖಾ­ಧಿಕಾರಿಗೆ ‘ನಿಮ್ಮ ಮೇಲಾ­ಧಿಕಾರಿ­ಗಳನ್ನು ಇಲ್ಲಿಗೆ ಬರಲು ಹೇಳಿ’ ಎಂದು ನ್ಯಾಯಾಧೀಶರು ಸೂಚಿಸಿದರು.

‘ನೀವು ಯಾವ ಆಧಾರದ ಮೇಲೆ ಈ ಪ್ರಕರಣ­ವನ್ನು ಮುಕ್ತಾಯ­ಗೊಳಿಸುವ ನಿರ್ಧಾರ ಕೈಗೊಂಡಿರಿ? ಇದೆಂತಹ ತನಿಖೆ... ನಿಮ್ಮ ಮೇಲಾ­ಧಿಕಾರಿಗಳು ಇದನ್ನು ಗಮನಿಸಲಿಲ್ಲವೆ? ಈ ಪ್ರಕರಣದ ವಿವರ­ವಿರುವ ಪೊಲೀಸರ ಕಡತ ತೆಗೆದುಕೊಂಡು ಬನ್ನಿ ಮತ್ತು ನಿಮ್ಮ ಮೇಲಾಧಿಕಾರಿ­ಯನ್ನು ಈಗಲೇ ಇಲ್ಲಿಗೆ ಬರಲು ಹೇಳಿ’ ಎಂದು ನ್ಯಾಯಾಧೀಶರು ಆದೇಶಿಸಿ­ದರು.

ಪರಿಸಮಾಪ್ತಿ ವರದಿ ಜೊತೆಗೆ ಸಲ್ಲಿಸಿರುವ ಕೆಲವು ಕಾಗದಪತ್ರಗಳು ಖಾಲಿ ಇದ್ದ ಕಾರಣ ಮತ್ತಷ್ಟು ಕೆಂಡಾ­ಮಂಡಲರಾದ ನ್ಯಾಯಾಧೀಶ ಭರತ್‌ ಪರಾಶರ್‌, ‘ಕೋರ್ಟ್‌ಗೆ ಏನನ್ನಾ­ದರೂ ಸಲ್ಲಿಸಬಹುದೆಂದು ಸಿಬಿಐ ಅಂದುಕೊಂಡಿದೆಯೋ ಹೇಗೆ?  ಎಂದು ಪ್ರಶ್ನಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT