ಶ್ರೀನಗರ(ಪಿಟಿಐ): ಕಾಶ್ಮೀರ ಕಣಿವೆಯಲ್ಲಿ ತಮ್ಮ ಸಂಘಟನೆಗೆ ಯಾವುದೇ ರಾಜಕೀಯ ಚಟುವಟಿಕೆಗೆ ಮುಫ್ತಿ ಮೊಹಮ್ಮದ್ ಸಯೀದ್ ಅವರ ಸರ್ಕಾರವು ಅವಕಾಶ ನೀಡುತ್ತಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಸಂಘಟನೆ ಮುಖಸ್ಥ ಯಾಸೀನ್ ಮಲೀಕ್ ಅವರು ಬುಧವಾರ ಆರೋಪಿಸಿದ್ದಾರೆ.
ಅಲ್ಲದೇ, ಸರ್ಕಾರದ ಕ್ರಮ ಖಂಡಿಸಿ, ಶುಕ್ರವಾರದಿಂದ ‘ಜೈಲ್ ಭರೋ’ ಚಳವಳಿಗೆ ಕರೆ ನೀಡಿದ್ದಾರೆ.
‘ರಾಜಕೀಯ ಚಟುವಟಿಕೆ ನಡೆಸಲು ಸರ್ಕಾರ ನಮಗೆ ಯಾವುದೇ ಅವಕಾಶ ನೀಡುತ್ತಿಲ್ಲ. ಕಣಿವೆ ಗ್ರಾಮಗಳಿಗೆ ನಾವು ಭೇಟಿ ನೀಡಲು ಬಯಸುತ್ತೇವೆ. ಆದರೆ ಸರ್ಕಾರ ನಮ್ಮನ್ನು ವಶಕ್ಕೆ ಪಡೆದು ಅಡ್ಡಿಪಡಿಸುತ್ತಿದೆ. ಇಲ್ಲಿ ರಾಜಕೀಯ ಚುಟುವಟಿಕೆಗೆ ಅವಕಾಶ ಇಲ್ಲ’ ಎಂದು ಮಲೀಕ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸುಮ್ಮನಿರಲ್ಲ: ಪ್ರತ್ಯೇಕತಾವಾದಿಗಳಿಗೆ ರಾಜಕೀಯ ಅವಕಾಶ ನೀಡದಿರುವ ಮೂಲಕ ಹಾಗೂ ಅವರನ್ನು ಗೃಹ ಬಂಧನದಲ್ಲಿ ಇಡುವ ಮೂಲಕ ಮುಫ್ತಿ ಅವರು ತಮ್ಮ ಆರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಬೇಕು ಅಂದುಕೊಂಡಿದ್ದಾರೆ ಎಂದು ಮಲೀಕ್ ಆರೋಪಿಸಿದ್ದಾರೆ.
‘ಈ ರೀತಿಯ ತಂತ್ರಗಾರಿಕೆಯಿಂದ ಮುಖ್ಯಮಂತ್ರಿ ಅವರು ತಮ್ಮ ಅಧಿಕಾರಾವಧಿಯನ್ನು ಪೂರೈಸಬೇಕು ಎಂದು ಕೊಂಡಿದ್ದಾರೆ. ಆದರೆ ನಾವು ಸುಮ್ಮನೆ ಕೂರುವುದಿಲ್ಲ. ನಿರ್ಬಂಧಗಳ ವಿರುದ್ಧ ಪ್ರತಿಭಟಿಸುವುದು ನಮ್ಮ ಕರ್ತವ್ಯ’ ಎಂದಿದ್ದಾರೆ.
ಜೈಲ್ ಭರೋಗೆ ಕರೆ: ಜೆಕೆಎಲ್ಎಫ್ ಸಂಘಟನೆಯು ಶುಕ್ರವಾರದಿಂದ 10 ದಿನಗಳ ಕಾಲ ಜೈಲ್ ಭರೋ ಚಳವಳಿ ನಡೆಸಲಿದೆ. ‘10 ದಿನಗಳ ನಂತರವೂ, ಸರ್ಕಾರ ಇದೇ ರೀತಿಯ ತಂತ್ರಗಳನ್ನು ಮುಂದುವರೆಸಿದರೆ, ನಾವು ಮತ್ತೇನಾದೂ ಪರಿಹಾರಕ್ಕೆ ಯತ್ನಿಸುತ್ತೇವೆ. ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದ ಅವರು, ಮಧ್ಯಮಗಳು ಸರ್ಕಾರದ ‘ಸಾರ್ವಜನಿಕ ಸಂಪರ್ಕಾಧಿಕಾರಿಗಳಂತೆ’ ವರ್ತಿಸುತ್ತಿವೆ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.