ನವದೆಹಲಿ (ಪಿಟಿಐ): ವಿ.ಕೆ. ಸಿಂಗ್ ಅವರು ಭೂಸೇನಾ ಮುಖ್ಯಸ್ಥರಾಗಿದ್ದಾಗ ಸೇನೆಯ ಉಪಮುಖ್ಯಸ್ಥರಾಗಿದ್ದ ದಲ್ಬೀರ್ ಸಿಂಗ್ ಸುಹಾಗ್ ಅವರ ವಿರುದ್ಧ ತೆಗೆದುಕೊಂಡ ಶಿಸ್ತು ಕ್ಷಮವು ‘ಪೂರ್ವಯೋಜಿತ, ಅಸ್ಪಷ್ಟ ಹಾಗೂ ಅಕ್ರಮ’ ಎಂದು ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ.
ಸೇನೆಯ ಗುಪ್ತಚರ ವಿಭಾಗದ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯೊಂದನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆಪಾದಿಸಿ ಸುಹಾಗ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿತ್ತು. ಸಹಜ ನ್ಯಾಯವನ್ನು ಬದಿಗೊತ್ತಿ ಕಾನೂನು ಬಾಹಿರವಾಗಿ ಮತ್ತು ಪೂರ್ವಗ್ರಹಪೀಡಿತ ಮನೋಭಾವನೆಯಿಂದ ಸುಹಾಗ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ರಕ್ಷಣಾ ಇಲಾಖೆಯು ಇತ್ತೀಚೆಗೆ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.
ಈಗ ಕೇಂದ್ರ ಸಚಿವರಾಗಿರುವ ಜನರಲ್ ವಿ.ಕೆ. ಸಿಂಗ್ ಅವರ ನಿವೃತ್ತಿಯ ನಂತರ ಭೂಸೇನಾ ಮುಖ್ಯಸ್ಥರಾದ ಜನರಲ್ ವಿಕ್ರಮ್ ಸಿಂಗ್ ಅವರು ಸುಹಾಗ್ ಅವರ ವಿರುದ್ಧ ಶಿಸ್ತು ಕ್ರಮವನ್ನು ರದ್ದುಪಡಿಸಿ ಸೇನಾ ಕಮಾಂಡರ್ ಹುದ್ದೆಗೆ ಬಡ್ತಿ ನೀಡಲು ಶಿಫಾರಸು ಮಾಡಿದ್ದರು.
ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಹಿರಿಯ ಸೇನಾಧಿಕಾರಿಯೊಬ್ಬರ ಬಡ್ತಿಗೆ ಸಂಬಂಧಿಸಿದಂತೆ ಎನ್ಡಿಎ ಸರ್ಕಾರವು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ನಿವೃತ್ತ ಜನರಲ್ ವಿ.ಕೆ. ಸಿಂಗ್ ಅವರನ್ನು ಕಾಂಗ್ರೆಸ್ ಆಗ್ರಹಪಡಿಸಿದೆ.
‘ಸಿಂಗ್ ಸಚಿವರಾಗಿ ಉಳಿಯಲು ಸಾಧ್ಯವಿಲ್ಲ. ಅವರನ್ನು ಸಂಪುಟದಿಂದ ವಜಾ ಮಾಡಬೇಕೇ ಅಥವಾ ಅವರೇ ರಾಜೀನಾಮೆ ನೀಡಬೇಕೇ ಎಂಬುದು ಚರ್ಚಾ ವಿಷಯ’ ಎಂದು ಎಐಸಿಸಿ ವಕ್ತಾರ ಅಭಿಷೇಕ್ ಮನುಸಿಂಘ್ವಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡುತ್ತಾ ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.