ನವದೆಹಲಿ: ಮನಮೋಹನ್ಸಿಂಗ್ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದರು. ಆಗ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅವರು ಬಂದಿದ್ದರೇ? ನಾನು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗ ಜಗದೀಶ್ ಶೆಟ್ಟರ್ ಬಂದಿದ್ದರೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ತಾವು ಭಾಗವಹಿಸದೆ ಇರುವುದರಿಂದ ರಾಜ್ಯಕ್ಕೆ ಕೇಂದ್ರದ ನೆರವು ಸಿಗುವುದಿಲ್ಲ ಎಂದು ವ್ಯಾಖ್ಯಾನಿಸುವುದು ಅರ್ಥಹೀನ ಎಂದರು.
ಡಿವಿಎಸ್ ಜತೆ ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ: ಮೋದಿ ಅವರನ್ನು ಭೇಟಿ ಮಾಡುವ ಮೊದಲು, ಸಿದ್ದರಾಮಯ್ಯ ಅವರು ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಕಂಡು ರಾಜ್ಯದ ರೈಲ್ವೆ ಯೋಜನೆಗಳನ್ನು ಕುರಿತು ಚರ್ಚಿಸಿದರು. ಮೈಸೂರು– ಬೆಂಗಳೂರು ಜೋಡಿ ಮಾರ್ಗವನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಮನವಿ ಮಾಡಿದರು. ಸಮಾನ ವೆಚ್ಚ ಹಂಚಿಕೆ ಯೋಜನೆಗಳಿಗೆ ರಾಜ್ಯದ ಹೊರೆ ಕಡಿಮೆ ಮಾಡಬೇಕೆಂದು ಮನವಿ ಮಾಡಿದರು. ಆದರೆ, ಸದಾನಂದಗೌಡರು ರೈಲ್ವೆಯೂ ಹಣಕಾಸು ಸಮಸ್ಯೆ ಎದುರಿಸುತ್ತಿದೆ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.