ಇಂದೋರ್, ಚೆನ್ನೈ (ಪಿಟಿಐ): ‘ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಬೇಕು ಎಂದು ಶತಮಾನಗಳ ಹಿಂದೆ ಮಹಾತ್ಮಗಾಂಧಿ ಕರೆ ನೀಡಿದ್ದರು. ಅವರ ಆಶಯ ಬಹುಭಾಷೆಯ ಈ ದೇಶದ ಮೂಲೆ ಮೂಲೆಯಲ್ಲೂ ರಿಂಗಣಿಸಿದೆ’ ಎಂದು ಮಧ್ಯಭಾರತ ಹಿಂದಿ ಸಾಹಿತ್ಯ ಸಮಿತಿ ಪ್ರಚಾರ ಉಸ್ತುವಾರಿ ಅರವಿಂಜ್ ಓಝಾ ಹೇಳಿದ್ದಾರೆ.
‘ಹಿಂದಿ ದಿವಸ’ ಸಂದರ್ಭದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ೧೯೧೮ರ ಮಾರ್ಚ್ ೨೯ರಂದು ಗಾಂಧೀಜಿ ಇಂದೋರ್ನಲ್ಲಿ ನಡೆದ ಎಂಟನೇ ಹಿಂದಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಹಿಂದಿಗೆ ರಾಷ್ಟ್ರಭಾಷೆ ಸ್ಥಾನಮಾನ ನೀಡಬೇಕು ಎಂದು ಮೊಟ್ಟ ಮೊದಲ ಬಾರಿ ಕರೆ ನೀಡಿದ್ದರು. ಸ್ವಾತಂತ್ರ್ಯ ಸಮರದ ಆ ಸಂದರ್ಭದಲ್ಲಿ ಗಾಂಧಿ ಕೊಟ್ಟಿದ್ದ ಕರೆ ಜನರ ಮನ ಮುಟ್ಟಿತ್ತು. ಇದರಿಂದಾಗಿ ಸ್ವಾತಂತ್ರ್ಯದ ಹಂಬಲ ಇನ್ನಷ್ಟು ಗಟ್ಟಿಯಾಗಿತ್ತು’ ಎಂದೂ ಓಝಾ ಹೇಳಿದರು.
ವಿಶ್ವಸಂಸ್ಥೆ: ಹಿಂದಿಯಲ್ಲೇ ಮೋದಿ ಭಾಷಣ ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲೇ ಭಾಷಣ ಮಾಡಲಿದ್ದಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ತಿಳಿಸಿದ್ದಾರೆ. |
ಓಝಾ ಹೇಳಿದ್ದು: ‘ಈ ದೇಶದಲ್ಲಿ ಆಗ ಹಿಂದಿ ಅಷ್ಟೇನು ಜನಪ್ರಿಯವಾಗಿರದಿದ್ದ ರಾಜ್ಯಗಳಿಗೆ ಗಾಂಧೀಜಿ ಹಿಂದಿ ಪ್ರಚಾರಕರನ್ನು ಕಳಿಸಿದ್ದರು. ಈ ಪೈಕಿ ಅವರ ಕಿರಿಯ ಮಗ ದೇವದಾಸ್ ಗಾಂಧಿ ಕೂಡ ಒಬ್ಬರಾಗಿದ್ದರು. ಈ ಐತಿಹಾಸಿಕ ಅಭಿಯಾನದ ಭಾಗವಾಗಿ ಆಗಿನ ಮದ್ರಾಸ್ ರಾಜ್ಯಕ್ಕೆ ಮೊದಲು ಹಿಂದಿ ಪ್ರಚಾರಕರನ್ನು ಕಳಿಸಲಾಗಿತ್ತು.
‘ಗಂಗಾ–ಜಮುನಿ ಸಹಬಾಳ್ವೆ ಸಂಸ್ಕೃತಿಯನ್ನು ಹಿಂದಿ ಭಾಷೆ ಬಿಂಬಿಸುತ್ತದೆ ಎಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಗಾಂಧಿ ಹೇಳಿದ್ದರು. ಹಿಂದಿಗೆ ರಾಷ್ಟ್ರಭಾಷೆ ಮಾನ್ಯತೆ ಸಿಗದ ಹೊರತು ಸ್ವರಾಜ್ಯಕ್ಕೆ ಅರ್ಥವೇ ಇಲ್ಲ ಎಂದೂ ಹೇಳಿದ್ದರು’ ಎಂದು ಓಝಾ ನೆನಪಿಸಿಕೊಂಡರು.
ತಮಿಳು ಪಕ್ಷಗಳ ವಿರೋಧ
ಇಂಗ್ಲಿಷ್ ಜತೆಗೆ ಹಿಂದಿಯನ್ನೂ ಪ್ರಥಮ ಭಾಷೆಯಾಗಿ ಕಲಿಸಬೇಕು ಎಂದು ವಿಶ್ವವಿದ್ಯಾಲಯಗಳಿಗೆ ಗೃಹ ಸಚಿವಾಲಯ ಕಳುಹಿಸಿದ ಸುತ್ತೋಲೆಗೆ ಪಿಎಂಕೆ, ಎಂಡಿಎಂಕೆ ವಿರೋಧ ವ್ಯಕ್ತಪಡಿಸಿವೆ.
‘ಇದು ಹಿಂದಿಯನ್ನು ಹೇರುವ ಇನ್ನೊಂದು ಪ್ರಯತ್ನ. ಕೂಡಲೇ ಈ ಸುತ್ತೋಲೆಯನ್ನು ವಾಪಸ್ ಪಡೆಯಬೇಕು’ ಎಂದು ಪಿಎಂಕೆ ಸಂಸ್ಥಾಪಕ ಎಸ್.ರಾಮದಾಸ್ ಹಾಗೂ ಎಂಡಿಎಂಕೆ ಮುಖ್ಯಸ್ಥ ವೈಕೊ ಪ್ರತ್ಯೇಕ ಹೇಳಿಕೆಗಳಲ್ಲಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.