ನವದೆಹಲಿ (ಪಿಟಿಐ): 2009ರಲ್ಲಿ ನಡೆದ ನಕಲಿ ಎನ್ಕೌಂಟರ್ನಲ್ಲಿ ಭಾಗಿಯಾಗಿದ್ದ ಉತ್ತರಾಖಂಡದ 17 ಪೊಲೀಸರಿಗೆ ದೆಹಲಿ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಗಾಜಿಯಾಬಾದ್ನ 22 ವರ್ಷದ ಎಂ.ಬಿ.ಎ ವಿದ್ಯಾರ್ಥಿ ರಣಬೀರ್ ಸಿಂಗ್ ಡೆಹ್ರಾಡೂನ್ಗೆ ಕೆಲಸಕ್ಕಾಗಿ ತೆರಳಿದ್ದಾಗ ನಕಲಿ ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದರು.
18 ಪೊಲೀಸರ ಪೈಕಿ ಒಬ್ಬ ಪೊಲೀಸ್ ವಿರುದ್ಧ ತಪ್ಪಾಗಿ ಪ್ರಕರಣ ದಾಖಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದು ಅತಿ ಅಪರೂಪದ ಪ್ರಕರಣವೇನೂ ಅಲ್ಲ. ಆದ್ದರಿಂದ ತಪ್ಪಿತಸ್ಥರಿಗೆ ಮರಣದಂಡನೆ ನೀಡಿಲ್ಲ ಎಂದು ಎಂದು ಸಿಬಿಐ ವಿಶೇಷ ನ್ಯಾಯಾಧೀಶರಾದ ಜೆಪಿಎಸ್ ಮಲ್ಲಿಕ್ ಹೇಳಿದ್ದಾರೆ.
ತಪ್ಪಿತಸ್ಥರ ಪೈಕಿ ಏಳು ಮಂದಿ ಪೊಲೀಸರು ಮತ್ತು ಆರು ಮಂದಿ ಸಬ್ಇನ್್ಸಪೆಕ್ಟರ್ಗಳಿಗೆ ತಲಾ 50 ಸಾವಿರ ರೂಪಾಯಿ ದಂಡವನ್ನೂ ನ್ಯಾಯಾಲಯ ವಿಧಿಸಿದೆ.
ರಣಬೀರ್ನ ಅಪಹರಣ ಮತ್ತು ಕೊಲೆಯ ಸಂಚಿನಲ್ಲಿ ಭಾಗಿಯಾದ ಇತರ 10 ಪೊಲೀಸರಿಗೆ ತಲಾ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಹೀಗೆ ಸಂಗ್ರಹಿಸಿದ ಹಣವನ್ನು ರಣಬೀರ್ ಅವರ ಪೋಷಕರಿಗೆ ಪರಿಹಾರವಾಗಿ ನೀಡಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.
ನ್ಯಾಯಾಲಯದಲ್ಲಿ ಹಾಜರಿದ್ದ ಮೃತ ವಿದ್ಯಾರ್ಥಿಯ ಪೋಷಕರು ತೀರ್ಪಿಗೆ ಅಸಂತೋಷ ವ್ಯಕ್ತ ಪಡಿಸಿದ್ದು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಪೊಲೀಸರಿಗೆ ಮರಣದಂಡನೆಯಾಗಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.