ನವದೆಹಲಿ: ಪಾಕಿಸ್ತಾನ ಉಗ್ರರ ಸ್ವರ್ಗ ಎಂದು ಅಮೆರಿಕ ಹೇಳಿಕೆ ನೀಡಿದ ಬೆನ್ನಲ್ಲೇ, ಪಾಕಿಸ್ತಾನದಲ್ಲಿ ಭಯೋತ್ಪಾದನೆ ಎಂಬುದು ಅಲ್ಲಿನ ನೀತಿಯಾಗಿ ಬಿಟ್ಟಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಕಾರ್ಗಿಲ್ ಹುತಾತ್ಮರಿಗೆ ನಮನ ಅರ್ಪಿಸುವ ಸಲುವಾಗಿ ನವದೆಹಲಿಯಲ್ಲಿ ಹಮ್ಮಿಕೊಂಡ ಕಾರ್ಗಿಲ್ ಪರಾಕ್ರಮ್ ಪರೇಡ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನಾಯ್ಡು, ಭಯೋತ್ಪಾದನೆ ಎಂಬುದು ಮಾನವೀಯತೆಯ ಶತ್ರು. ಅದಕ್ಕೆ ಧರ್ಮವಿಲ್ಲ. ಈ ಭಯೋತ್ಪಾದನೆ ಪಾಕಿಸ್ತಾನದ ರಾಜ್ಯ ನೀತಿ ಆಗಿರುವುದು ಖೇದಕರ ಎಂದು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದು, ಪ್ರೋತ್ಸಾಹಿಸುವುದು ದೇಶಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲ್ಲ ಎಂಬುದನ್ನು ನಮ್ಮ ನೆರೆರಾಷ್ಟ್ರ ಅರ್ಥ ಮಾಡಿಕೊಳ್ಳಬೇಕು. 1971ರಲ್ಲಿ ನಡೆದ ಯುದ್ಧದಲ್ಲಿ ಏನಾಯಿತು ಎಂಬುದನ್ನು ಅವರು ನೆನಪಿಸಿಕೊಳ್ಳಲಿ ಎಂದು ನಾಯ್ಡು ಹೇಳಿದ್ದಾರೆ.
ನಾವು ಶಾಂತಿ ಪ್ರಿಯರು. ನಾವು ಇಲ್ಲಿಯವರೆಗೆ ಯಾವುದೇ ರಾಷ್ಟ್ರದ ಮೇಲೆ ದಾಳಿ ನಡೆಸಿಲ್ಲ. ಅದೇ ನಮ್ಮ ವಿಶೇಷತೆ. ನಮಗೆ ಯುದ್ಧ ಬೇಡ, ಹಿಂಸಾಚಾರಬೇಡ, ಶಾಂತಿ ಮಾತ್ರ ಬೇಕಿದೆ. ನಾವು ನಮ್ಮ ನೆರೆ ರಾಷ್ಟ್ರದವರ ಜತೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇವೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದು ಅವರಿಗೆ ನೆನಪಿರಲಿ. ಪಾಕ್ ಆಕ್ರಮಿತ ಕಾಶ್ಮೀರದ ಒಂದು ಇಂಚು ಭಾಗವನ್ನೂ ನಾವು ಯಾರಿಗೂ ಬಿಟ್ಟುಕೊಡುವುದಿಲ್ಲ. ಭಿನ್ನಾಭಿಪ್ರಾಯಗಳನ್ನು ಒಪ್ಪಬಹುದು ಆದರೆ ಭಾವೈಕ್ಯತೆಗೆ ಧಕ್ಕೆ ತರುವುದನ್ನು ಒಪ್ಪಲಾಗುವುದಿಲ್ಲ ಎಂದು ನಾಯ್ಡು ಗುಡುಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.