ADVERTISEMENT

2019ರಲ್ಲಿ ನಾವು ಅಧಿಕಾರಕ್ಕೇರುತ್ತೇವೆ: ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2018, 12:50 IST
Last Updated 18 ಮಾರ್ಚ್ 2018, 12:50 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಎಐಸಿಸಿ 84ನೇ ಮಹಾ ಅಧಿವೇಶನದಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರದಲ್ಲಿ ಆಡಳಿತಾರೂಡ ಪಕ್ಷ ಅಧಿಕಾರದ ಮದದಲ್ಲಿದೆ ಎಂದು ಟೀಕಿಸಿದ್ದಾರೆ. ಬಿಜೆಪಿಯನ್ನು ಹಿಂದೂ ಪುರಾಣವಾದ ಮಹಾಭಾರತದ ಕೌರವರಿಗೆ ಹೋಲಿಸಿದ ರಾಹುಲ್, ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಮಹಾಯುದ್ಧ ನಡೆದಿತ್ತು. ಕೌರವರು ಶಕ್ತಿಶಾಲಿಗಳು ಮತ್ತು ಅಹಂಕಾರಿಗಳಾಗಿದ್ದರು. ಪಾಂಡವರ ಪುಟ್ಟ ಸೇನೆಯೊಂದಿಗೆ ಅವರು ಯುದ್ಧ ಮಾಡಿದ್ದರು. ಪಾಂಡವರು ವಿನಯವಂತರಾಗಿದ್ದು, ಹೆಚ್ಚು ಮಾತನಾಡುತ್ತಿರಲಿಲ್ಲ. ಅವರು ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದರು. ಕೌರವರಂತೆ ಬಿಜೆಪಿ ಮತ್ತು ಆರ್‍ಎಸ್‍ಎಸ್ ಅಧಿಕಾರಕ್ಕಾಗಿ ಹಪಹಪಿಸುತ್ತಿದೆ. ಪಾಂಡವರಂತೆ ಕಾಂಗ್ರೆಸ್ ಸತ್ಯಕ್ಕಾಗಿ ಹೋರಾಡುತ್ತಿದೆ. ಹತ್ಯೆಯ ಆರೋಪ ಹೊತ್ತ ವ್ಯಕ್ತಿಯನ್ನು ಅವರು ಬಿಜೆಪಿಯ ಅಧ್ಯಕ್ಷರಾಗಿ ಸ್ವೀಕರಿಸುತ್ತಾರೆ. ಆದರೆ ಕಾಂಗ್ರೆಸ್‍ನಲ್ಲಿ ಹಾಗೆ ಇಲ್ಲ. ಭಾರತದ ಜನರು ಬಿಜೆಪಿಯವರಂತೆ ವರ್ತಿಸಲು ನಮ್ಮನ್ನು ಬಿಡುವುದಿಲ್ಲ. ನಾವೇನಾದರೂ ಹಾಗೆ ಮಾಡಿದರೆ ಅವರು ನಮಗೆ ಶಿಕ್ಷೆ ನೀಡುತ್ತಾರೆ. ಬಿಜೆಪಿ ಎಂಬುದು  ಸಂಘಟನೆಯೊಂದರ ದನಿ, ಆದರೆ ಕಾಂಗ್ರೆಸ್ ದೇಶದ ದನಿಯಾಗಿದೆ ಎಂದು ರಾಹುಲ್ ಹೇಳಿದ್ದಾರೆ.

ರಾಹುಲ್ ಭಾಷಣದ ಮುಖ್ಯಾಂಶಗಳು
* ಕಾಂಗ್ರೆಸ್ ಪಕ್ಷ  ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು
ಈ ದೇಶದ ಮಣ್ಣಿನಲ್ಲಿ ನಮ್ಮ ಹೆಂಗಸರು ಮತ್ತು ಗಂಡಸರ ರಕ್ತದ ಕಲೆ ಇದೆ. ಗಾಂಧೀಜಿ ದೇಶಕ್ಕಾಗಿ ಪ್ರಾಣ ತೆತ್ತರು. ನಮ್ಮ ನಾಯಕರು ಜೈಲಿನಲ್ಲಿದ್ದಾಗ ಅವರ ನಾಯಕ ಸಾವರ್ಕರ್ ಬ್ರಿಟಿಷರಲ್ಲಿ ಕ್ಷಮೆಯಾಚಿಸಿ ಪತ್ರ ಬರೆಯುತ್ತಿದ್ದರು. ನಾವು ಸತ್ಯಕ್ಕಾಗಿ ಹೋರಾಡುತ್ತಿದ್ದೇವೆ, ಹಾಗಾಗಿ ದೇಶದ ಜನತೆ ನಮಗೆ ಇತರ ಪಕ್ಷಗಳಿಗಿಂತ ಉನ್ನತ ಸ್ಥಾನವನ್ನು ನೀಡಿದ್ದಾರೆ.

*ದೇಶದಲ್ಲಿ ರೈತರು ಸಾಯುತ್ತಿದ್ದರೆ ಪ್ರಧಾನಿ ಮೋದಿ ಯೋಗ ಮಾಡಲು ಹೇಳುತ್ತಿದ್ದಾರೆ

ADVERTISEMENT


*ಉನಾದಲ್ಲಿ ಯುವಕರ ಮೇಲೆ ಹಲ್ಲೆ ನಡೆಸಿದ ಕ್ರಿಮಿನಲ್‍ಗಳನ್ನು ನೋಡಿದರೆ ಆರ್‍ಎಸ್ಎಸ್‍ನ ಚಿಂತನಾರೀತಿ ಹೇಗಿದೆ ಎಂಬುದು ಅರ್ಥವಾಗುತ್ತದೆ. ನಾವು ಅವರಲ್ಲಿ ಉತ್ತರ ಕೇಳಿದಾಗ ಅವರು ಮೌನ ಪಾಲಿಸಿದರು. ದಶಲಕ್ಷದಷ್ಟಿರುವ ಮುಸ್ಲಿಮರಲ್ಲಿ ನೀವು ಇಲ್ಲಿಯವರಲ್ಲ ಎಂದು ಅವರು ಹೇಳುತ್ತಾರೆ. ನಿಮ್ಮ ಭಾಷೆಯನ್ನು ಬದಲಿಸಿ ಎಂದು ಅವರು ತಮಿಳರಿಗೆ ಹೇಳುತ್ತಾರೆ. ಈಶಾನ್ಯ ರಾಜ್ಯದ ಜನರಲ್ಲಿ, ನಿಮ್ಮ ಆಹಾರ ನಮಗೆ ಇಷ್ಟವಾಗಲ್ಲ ಅಂತಾರೆ. ನೀವು ಬಾಯ್ಮುಚ್ಚಿ ಇಲ್ಲದಿದ್ದರೆ ನಿಮ್ಮನ್ನು ಸಾಯಿಸಲಾಗುವುದು ಎಂದು ಗೌರಿ ಲಂಕೇಶ್ ಮತ್ತು ಕಲ್ಬುರ್ಗಿಗೆ ಹೇಳಿದವರು ಅವರು. ಸರಿಯಾದ ಬಟ್ಟೆ ಧರಿಸದೇ ಇದ್ದರೆ ನಿಮ್ಮ ಮೇಲೆ ಹಲ್ಲೆ ನಡೆಸಲಾಗುವುದು ಎಂದು ಬೆದರಿಕೆ ಒಡ್ಡಿದವರೂ ಅವರೇ ಎಂದು ರಾಹುಲ್ ಆರ್‍ಎಸ್‍ಎಸ್ ವಿರುದ್ಧ ಕಿಡಿ ಕಾರಿದ್ದಾರೆ.


* ಭಾರತದ ಅರ್ಥ ವ್ಯವಸ್ಥೆ
ಪಿಎನ್‍ಬಿ ಮೋಸ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ರಾಹುಲ್, ಈ ಬಗ್ಗೆ ವಿತ್ತ ಸಚಿವರು ಮತ್ತು ಅವರು ಸರ್ಕಾರ ಮೌನವಾಗಿದೆ. ಯಾಕೆಂದರೆ ಇವರೆಲ್ಲರೂ ದೊಡ್ಡ ಉದ್ಯಮಿಗಳಿಗಾಗಿ ಕೆಲಸ ಮಾಡುತ್ತಾರೆ. ಒಂದು ವೇಳೆ ನೀವು ಬಡವರಾಗಿದ್ದರೆ ನೀಲು ರೈತರಾಗಬೇಕು ಇಲ್ಲವೇ ನಿರುದ್ಯೋಗಿ ಆಗಬೇಕು, ಇದೆರಡೇ ಆಯ್ಕೆ ನಿಮ್ಮ ಮುಂದಿರುತ್ತದೆ.

*ನಾನು ದೇವಸ್ಥಾನಕ್ಕೆ ಮಾತ್ರ ಅಲ್ಲ, ಮಸೀದಿ, ಚರ್ಚ್ ಮತ್ತು ಗುರುದ್ವಾರಕ್ಕೂ ಹೋಗುತ್ತೇನೆ.

*ನರೇಂದ್ರ ಮೋದಿ ಎಂಬ ಹೆಸರು ಭಾರತದ ದೊಡ್ಡ ಉದ್ಯಮಿ ಮತ್ತು ಪ್ರಧಾನಿಯನ್ನು ಸೂಚಿಸುತ್ತದೆ. ಮೋದಿಯವರು ₹30,000 ಕೋಟಿಯನ್ನು ಮೋದಿಗೆ ನೀಡುತ್ತಾರೆ. ಇದರ ಬದಲಿಗೆ ಮೋದಿಯವರ ಪ್ರಚಾರಕ್ಕಾಗಿ ಮೋದಿ ಹಣ ನೀಡುತ್ತಾರೆ ಮತ್ತು ಚುನಾವಣೆ ಕಣಕ್ಕಿಳಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.