ADVERTISEMENT

ಟಿಎಂಸಿ, ಬಿಜೆಪಿ ಸದಸ್ಯರ ವಾಕ್ಸಮರ: ಕಲಾಪ ಮೊಟಕು

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST

ನವದೆಹಲಿ: ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸದಸ್ಯ ಕಲ್ಯಾಣ್‌ ಬ್ಯಾನರ್ಜಿ ಮತ್ತು ಸಚಿವ ಗಿರಿರಾಜ್‌ ಸಿಂಗ್‌ ನಡುವೆ ಲೋಕಸಭೆಯಲ್ಲಿ ಬುಧವಾರ ನಡೆದ ಜಟಾಪಟಿಯು ‘ಹಿಂದುಳಿದ ವರ್ಗಗಳ (ಒಬಿಸಿ) ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆ’ ಕುರಿತ ಚರ್ಚೆ ಮೊಟಕುಗೊಳ್ಳಲು ಕಾರಣವಾಯಿತು.

ಕಳೆದ ಅಧಿವೇಶನದಲ್ಲಿ ಲೋಕಸಭೆ ಅನುಮೋದಿಸಿರುವ ಈ ಮಸೂದೆಗೆ ರಾಜ್ಯಸಭೆ ಕೆಲವು ತಿದ್ದುಪಡಿ ಸೂಚಿಸಿತ್ತು. ‌ಆದರೆ, ಯಾವುದೇ ತಿದ್ದುಪಡಿಗಳನ್ನು ಮಾಡದೇ ಮಸೂದೆಯನ್ನು ಅಂಗೀಕರಿಸಲು ಸರ್ಕಾರ ಅದನ್ನು ಮತ್ತೆ ಲೋಕಸಭೆಗೆ ತಂದಿದೆ.

ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್‌ ಗೆಹ್ಲೋಟ್‌, ‘ಯಾವುದೇ ತಿದ್ದುಪಡಿ ತರುವ ಅಗತ್ಯವಿಲ್ಲ’ ಎಂದು ತಿಳಿಸಿದರು.

ADVERTISEMENT

ವಾಗ್ಯುದ್ಧದಲ್ಲಿ ಕರಗಿದ ಚರ್ಚೆ: ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ, ‘ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಾಕಷ್ಟು ಆದ್ಯತೆ ನೀಡುತ್ತಿದೆ ಎಂಬ ಸಚಿವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರಲ್ಲದೆ ಮೋದಿ ಮಾತ್ರ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಆದ್ಯತೆ ನೀಡಿಲ್ಲ. ಈ ಹಿಂದಿನ ಸರ್ಕಾರಗಳೂ ಗಮನಹರಿಸಿವೆ’ ಎಂದರು.

‘ಮಸೂದೆ ಬಗ್ಗೆ ಬಿಜೆಪಿ ಹೊಂದಿರುವ ಧೋರಣೆ ವಿರೋಧಿಸಿರುವ ಹಿಂದುಳಿದ ಸಮುದಾಯ ಗುಜರಾತ್‌ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ
ದ್ದಾರೆ’ ಎಂದೂ ಅವರು ಟೀಕಿಸಿದರು.

ಈ ಟೀಕೆಗೆ ಕೇಂದ್ರದ ಸಣ್ಣ ಮತ್ತು ಮಧ್ಯಮ ಉದ್ಯಮ ಖಾತೆಯ ರಾಜ್ಯ ಸಚಿವ ಗಿರಿರಾಜ್‌ ಸಿಂಗ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದನ್ನು ಖಂಡಿಸಿದ ಬ್ಯಾನರ್ಜಿ, ‘ಬಿಜೆಪಿ ನೇತೃತ್ವದ ಆಡಳಿತದಲ್ಲಿ ವಿರೋಧ ಪಕ್ಷಗಳ ಸದಸ್ಯರನ್ನು ಬೆದರಿಸಲಾಗುತ್ತಿದೆ’ ಎಂದು ಆರೋಪಿಸಿದಾಗ ಬಿಜೆಪಿ ಸದಸ್ಯರಿಂದ ವಿರೋಧ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.