ನವದೆಹಲಿ (ಪಿಟಿಐ): ಕೇಂದ್ರದ ಎನ್ಡಿಎ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಫೆಬ್ರುವರಿ 1ರಂದು ಮಂಡನೆಯಾಗಲಿದ್ದು ದೇಶದ ಮಧ್ಯಮ ವರ್ಗ ಭಾರಿ ರಿಯಾಯಿತಿಯ ನಿರೀಕ್ಷೆ ಇರಿಸಿಕೊಳ್ಳಬಹುದು. ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ ಮತ್ತು ತೆರಿಗೆ ಹಂತಗಳಲ್ಲಿ ಬದಲಾವಣೆಯ ಬಗ್ಗೆ ಹಣಕಾಸು ಸಚಿವಾಲಯ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಈಗ ವಾರ್ಷಿಕ ₹2.5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ. ಈ ವಿನಾಯಿತಿ ಮಿತಿಯನ್ನು ₹5 ಲಕ್ಷಕ್ಕೆ ಏರಿಸಬೇಕು ಎಂಬ ಬೇಡಿಕೆ ಕಳೆದ ಕೆಲವು ವರ್ಷಗಳಿಂದ ಇದೆ. ಆದರೆ ಈ ಬಾರಿ ಅಷ್ಟಾಗದಿದ್ದರೂ ಕನಿಷ್ಠ ₹3 ಲಕ್ಷಕ್ಕೆ ಏರಿಕೆಯಾಗಬಹುದು. ಚಿಲ್ಲರೆ ಹಣದುಬ್ಬರ ಏರಿಕೆಯಿಂದ ಕಷ್ಟಕ್ಕೆ ಒಳಗಾಗಿರುವ ಮಧ್ಯಮ ಆದಾಯದ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಈಗ ಗರಿಷ್ಠ ಆದಾಯ ತೆರಿಗೆ ದರ ಶೇ 30ರಷ್ಟಿದೆ. ಅದನ್ನು ಶೇ 25ಕ್ಕೆ ಇಳಿಸಬೇಕು ಎಂಬ ಬೇಡಿಕೆಯನ್ನು ಕೈಗಾರಿಕಾ ಒಕ್ಕೂಟವು ಸರ್ಕಾರದ ಮುಂದಿಟ್ಟಿದೆ. ಆದರೆ ಜಿಎಸ್ಟಿ ಜಾರಿಯಿಂದಾಗಿ ತೆರಿಗೆ ಸಂಗ್ರಹ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿಲ್ಲ. ಆರ್ಥಿಕ ಕೊರತೆ ಹೆಚ್ಚಾಗಿದೆ. ಹಾಗಾಗಿ ಈ ಬೇಡಿಕೆ ಈಡೇರುವ ಸಾಧ್ಯತೆ ಇಲ್ಲ ಎಂದು ಒಕ್ಕೂಟದ ಮೂಲಗಳು ತಿಳಿಸಿವೆ.
ನೋಟು ರದ್ದತಿಯ ಪರಿಣಾಮ ಇನ್ನೂ ಒಂದಷ್ಟು ಕಾಲ ಇರಲಿದೆ. ಹಾಗಾಗಿ ಬೇಡಿಕೆಯನ್ನು ಉತ್ತೇಜಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕಿ) ಕೋರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.